ಚಿನ್ನಾಭರಣ ಕಳವು; ಅಂತಾರಾಜ್ಯ ಕಳ್ಳನ ಬಂಧನ

ಶೇರ್ ಮಾಡಿ

ದ.ಕ.ಜಿಲ್ಲೆ ಸಹಿತ ಹೊರ ರಾಜ್ಯಗಳಲ್ಲಿ ಕಳವು ಮಾಡುತ್ತಾ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ನಟೋರಿಯಸ್ ಕಳ್ಳನನ್ನು ಉಜಿರೆ ಮನೆಯೊಂದರಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ನಿವಾಸಿ ಉಮೇಶ್ ಯಾನೆ ಉಮೇಶ್ ಬಳೆಗಾರ(47) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

2023 ಆ.12 ರಂದು ಉಜಿರೆ ಅಜಿತ್ ನಗರದ ಕಲ್ಲೆ ನಿವಾಸಿ ಫೆಲಿಕ್ಸ್ ರೋಡ್ರಿಗಸ್ ಅವರ ಮನೆಯಲ್ಲಿ ಹಗಲಿನ ಹೊತ್ತು ಯಾರು ಇಲ್ಲದ ವೇಳೆ ಹಿಂಬಾಗಿಲ ಚಿಲಕ ತೆಗೆದು ಮನೆಯಲ್ಲಿದ್ದ 6.92 ಲಕ್ಷ ರೂ. ಮೌಲ್ಯದ 173 ಗ್ರಾಂ. ಚಿನ್ನಾಭರಣ, 35,000 ರೂ. ನಗದು, ಕಳವು ಮಾಡಿದ ವಿಚಾರಕ್ಕೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ದ.ಕ.ಜಿಲ್ಲಾ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತನಿರೀಕ್ಷಕರಾದ ನಾಗೇಶ್ ಕದ್ರಿ ಹಾಗೂ ಬೆರಳಚ್ಚು ಘಟಕದ ಪೊಲೀಸ್ ಉಪ ಅಧೀಕ್ಷಕ ಗೌರೀಶ್ ನೇತೃತ್ವದ ತಂಡ ಆರೋಪಿತ ಉಮೇಶ್‌ ನ ಜಾಡು ಹಿಡಿದು ಮೈಸೂರಿನ ಹುನ್ಸೂರಿನಲ್ಲಿ ಬಂಧಿಸಿ ಮಾರಾಟ ಮಾಡಿದ ಚಿನ್ನಾಭರಣ ಸಹಿತ ವಶಕ್ಕೆ ಪಡೆದಿದ್ದಾರೆ.

ಆರೋಪಿ ಪುತ್ತೂರು ನಗರ ಠಾಣೆ, ಸುಳ್ಯ, ಬಂಟ್ವಾಳ, ಮಂಗಳೂರಿನಲ್ಲಿ ಬಂದರು ಠಾಣೆ, ಉರ್ವಾ ಠಾಣೆ, ಮೂಡುಬಿದ್ರೆ, ಠಾಣೆ ಮತ್ತು ಕೇರಳ ರಾಜ್ಯದ ಕಾಸರಗೋಡು, ಕುಂಬಳೆ, ಪಾಲಕ್ಕಾಡು, ತ್ರಿಶೂರ್, ತಿರುವನಂತಪುರ ಹಾಗೂ ತಮಿಳುನಾಡು ರಾಜ್ಯದ ಸೇಲಂ, ಧರ್ಮಪುರಿ, ಕನ್ಯಾಕುಮಾರಿ, ದಿಂಡುಗಲ್ಲು ಮತ್ತು ಆಂಧ್ರ ರಾಜ್ಯದ ವೈಜಾಕ್ ಠಾಣಾ ವ್ಯಾಪ್ತಿಯಲ್ಲಿ ಹಲವು ರೀತಿಯ ಕಳ್ಳತನ ಮಾಡಿರುವುದು ತಿಳಿದು ಬಂದಿದೆ.

ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ ಎಸ್‌ ಐ ಗಳಾದ ಧನರಾಜ್ ಟಿ.ಎಂ., ಚಂದ್ರಶೇಖರ ಎ.ಎಂ., ಎ ಎಸ್‌ ಐ ಗಳಾದ ಕೆ.ಜೆ.ತಿಲಕ್, ಶಿವರಾಮ ನಾಯ್ಕ, ಎಚ್.ಸಿ.ಗಳಾದ ಬೆನ್ನಿಚ್ಚನ್, ಸುಂದರ ಶೆಟ್ಟಿ, ಪಳನಿವೇಲು, ಪ್ರಮೋದ್, ಇಬ್ರಾಹಿಂ, ಸಂಪತ್, ಪಿಸಿಗಳಾದ ಚರಣ ರಾಜ್, ಆನಂದ ಹಾಗೂ ಜಿಲ್ಲಾ ಪೊಲೀಸ್ ಗಣಕ ಯಂತ್ರ ವಿಭಾಗದ ದಿವಾಕರ್, ಸಂಪತ್ ತಂಡ ಆರೋಪಿ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a Reply

error: Content is protected !!