ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ: ದೇಶದ ವಿವಿಧ ಭಾಗಗಳಲ್ಲಿ ರಾಮನಿಗಾಗಿ ವಿಶೇಷ ಹೋಮ – ಹವನಗಳು, ಪೂಜೆ – ಪುನಸ್ಕಾರಗಳು

ಶೇರ್ ಮಾಡಿ

ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಧಾನಿ ಮೋದಿ ಅವರ ಸಾರಥ್ಯದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಅಂದಿನಿಂದಲೇ ಭಕ್ತರ ದರ್ಶನಕ್ಕೆ ರಾಮ ಮಂದಿರ ತೆರೆಯಲಿದೆ. ಇದರ ಜೊತೆಯಲ್ಲೇ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮಕಲಶೋತ್ಸವ ಕೂಡಾ ನಡೆಯಲಿದೆ. ಇದೇ ಹೊತ್ತಲ್ಲಿ ಭಾರತ ದೇಶ ಮಾತ್ರವಲ್ಲ, ವಿಶ್ವಾದ್ಯಂತ ಹಿಂದೂ ಧರ್ಮೀಯರು ಮನೆ ಮನೆಗಳಲ್ಲಿ ದೀಪ ಬೆಳಗಿ ರಾಮ ನಾಮ ಸ್ಮರಣೆ ಮಾಡಲಿದ್ದಾರೆ. ಇನ್ನು ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಜೊತೆಯಲ್ಲೇ ಇಲ್ಲಿನ ಪೂಜೆ, ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿದೆ.

ಅಭಿಜಿನ್ ಮುಹೂರ್ತದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ! ಜೊತೆಯಲ್ಲೇ ಬ್ರಹ್ಮ ಕಲಶೋತ್ಸವ

ಭಾರತ ದೇಶ ಮಾತ್ರವಲ್ಲ, ವಿಶ್ವದೆಲ್ಲೆಡೆಯ ಹಿಂದೂಗಳಿಗೆ ಜನವರಿ 22 ಅತ್ಯಂತ ಮಹತ್ವದ ದಿನ. ಶತಮಾನಗಳ ಕಾಲ ಹಿಂದೂ ಸಮುದಾಯ ಕಾದು ಕುಳಿತಿದ್ದ ಮಹತ್ವದ ಕಾರ್ಯಕ್ರಮವೊಂದು ಆ ದಿನ ನಡೆಯಲಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಇನ್ನೇನು ಮುಕ್ತಾಯ ಹಂತದಲ್ಲಿದೆ. ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ಮೂರ್ತಿ, ಅಂದರೆ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಜನವರಿ 22ರಂದು ಮುಹೂರ್ತ ನಿಗದಿ ಆಗಿದೆ. ಪ್ರಧಾನಿ ಮೋದಿ ಅವರು ರಾಮ ಮಂದಿರದಿಂದ 500 ಮೀಟರ್ ದೂರದಲ್ಲಿ ಇರುವ ತಾತ್ಕಾಲಿಕ ನೆಲೆಯಿಂದ ಬಾಲ ರಾಮನ ಮೂರ್ತಿಯನ್ನು ತಮ್ಮ ಕೈಗಳಲ್ಲಿ ಹೊತ್ತು ತಂದು ಕಾಲ್ನಡಿಗೆ ಮೂಲಕವೇ ಶ್ರೀರಾಮ ಮಂದಿರದ ಗರ್ಭ ಗೃಹ ತಲುಪಲಿದ್ದಾರೆ. ಅಭಿಜಿನ್ ಮುಹೂರ್ತದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಮೂಲಕ ಶ್ರೀರಾಮನ ಭವ್ಯ ಮಂದಿರವನ್ನ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಗರ್ಭ ಗೃಹದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆದ ಬೆನ್ನಲ್ಲೇ ಬ್ರಹ್ಮ ಕಲಶೋತ್ಸವ ಕೂಡಾ ಶುರುವಾಗಲಿದೆ. ಜನವರಿ 22 ರಿಂದ ಮಾರ್ಚ್ 10ರವರೆಗೆ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮ ಕಲಶೋತ್ಸವ ನಡೆಯಲಿದೆ. ರಾಮ ಮಂದಿರ ಉದ್ಘಾಟನೆಯ ದಿನ ದೇಶದ ಎಲ್ಲ ಜನರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ, ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ಎಲ್ಲರೂ ಭಾಗವಹಿಸಲಿ ಅನ್ನೋದು ಈ ಕಾರ್ಯಕ್ರಮದ ಆಶಯ.

​​ಶ್ರೀರಾಮನಿಗೆ ಹರಕೆ ಸೇವೆಯೇ ಇಲ್ಲ! ರಾಮಾರ್ಪಣೆಯೇ ಸೇವೆ!

ಸಾಮಾನ್ಯವಾಗಿ ದೇಗುಲಗಳಲ್ಲಿ ಅಷ್ಟೋತ್ತರ, ಶತನಾಮಾವಳಿ, ಅರ್ಚನೆ, ಅಭಿಷೇಕ, ಉತ್ಸವಗಳನ್ನ ಆಯೋಜಿಸಿ ಭಕ್ತರು ಹರಕೆ ಸೇವೆ ಸಲ್ಲಿಸುತ್ತಾರೆ. ಆದರೆ, ಅಯೋಧ್ಯಾ ಶ್ರೀರಾಮ ಮಂದಿರದಲ್ಲಿ ಭಕ್ತರು ಈ ರೀತಿಯ ಪ್ರತ್ಯೇಕ ಹರಕೆ ಸೇವೆ ಸಲ್ಲಿಸೋಕೆ ಅವಕಾಶವೇ ಇಲ್ಲವಂತೆ! ಹಾಗಂತ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹರಕೆ ಸೇವೆಗಳ ಬದಲಾಗಿ ರಾಮಾರ್ಪಣೆ ಸೇವೆ ಮಾಡಬಹುದು. ಭಕ್ತರು ತಾವು ಮಾಡಿದ ಸಮಾಜ ಸೇವೆಯನ್ನ ರಾಮನ ಸಾನಿಧ್ಯದಲ್ಲಿ ನಿವೇದನೆ ಮಾಡಿಕೊಳ್ಳುವ ಅವಕಾಶ ಇದೆಯಂತೆ. ಇದು ರಾಮ ರಾಜ್ಯ ನಿರ್ಮಾಣದ ಆಶಯ ಕೂಡಾ. ಈ ಕನಸು ನನಸಾಗಬೇಕಾದರೆ ಭಕ್ತರು ತಾವು ಮಾಡಿದ ಸಮಾಜ ಸೇವೆಯನ್ನ ಶ್ರೀರಾಮನ ಸಾನಿಧ್ಯದಲ್ಲಿ ನಿವೇದಿಸಿಕೊಳ್ಳಬೇಕು. ಇದೇ ರಾಮಾರ್ಪಣೆ ಸೇವೆ ಅಂತಾ ವಿಶ್ವ ಪ್ರಸನ್ನ ತೀರ್ಥರು ವಿವರಿಸಿದ್ದಾರೆ.

ಇನ್ನು ಅಯೋಧ್ಯಾ ಶ್ರೀರಾಮನ ದರ್ಶನ ಪಡೆಯುವ ಭಕ್ತರಿಗೆ ಆರತಿ ಹಾಗೂ ತೀರ್ಥ ಸಿಗುತ್ತದೆ. ಉತ್ತರ ಭಾರತದ ಸಿಹಿ ತಿನಿಸುಗಳ ನೈವೇದ್ಯವು ಪ್ರಸಾದ ರೂಪದಲ್ಲಿ ಸಿಗುತ್ತದೆ. ಆದರೆ, ವೈಯಕ್ತಿಕವಾಗಿ ಯಾವುದೇ ಹರಕೆ ಸೇವೆಯನ್ನ ಈ ದೇವಸ್ಥಾನದಲ್ಲಿ ಮಾಡೋಕೆ ಸಾಧ್ಯವಿಲ್ಲ ಅಂತಾ ಪೇಜಾವರ ಮಠಾಧೀಶ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ. ರಾಮನ ಆದರ್ಶ ಪಾಲನೆಯೇ ಶ್ರೀರಾಮನಿಗೆ ಸಲ್ಲಿಸಬಹುದಾದ ಹರಕೆ ಎನ್ನಬಹುದು.

ರಾಮಮಂದಿರ ಉದ್ಘಾಟನೆ ದಿನ ಮನೆ ಮುಂದೆ 5 ದೀಪ ಹಚ್ಚೋದು ಮರೆಯಬೇಡಿ!

ಹಿಂದೂಗಳ ಪಾಲಿಗೆ ಬರೋಬ್ಬರಿ 5 ಶತಮಾನಗಳ ನಿರೀಕ್ಷೆ ಇದು. ಅಯೋಧ್ಯೆಯ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಮತ್ತೆ ನಿರ್ಮಾಣವಾಗಲು 5 ಶತಮಾನಗಳ ಕಾಲ ಬೇಕಾಯ್ತು. ಇದನ್ನು ದೇಶದ ಜನತೆ ನೆನಪಿಡಬೇಕು. ಈ 5 ಶತಮಾನಗಳ ಸಂಕೇತವಾಗಿ ರಾಮ ಮಂದಿರ ಉದ್ಘಾಟನೆಯ ದಿನ ಎಲ್ಲರೂ ತಮ್ಮ ಮನೆ ಮುಂದೆ 5 ದೀಪಗಳನ್ನು ಹಚ್ಚಿಡಬೇಕು ಎಂದು ಕರೆ ನೀಡಲಾಗಿದೆ. ಕೇವಲ ಮನೆಗಳ ಎದುರು ಮಾತ್ರವಲ್ಲ, ದೇವಸ್ಥಾನ, ಮಂದಿರಮ ಧಾರ್ಮಿಕ ಕೇಂದ್ರಗಳಲ್ಲೂ ದೀಪ ಹಚ್ಚಬೇಕು. ವಿಶೇಷ ಪೂಜೆ ಹಾಗೂ ಭಜನೆ ನಡೆಸಬೇಕು ಅಂತಾ ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

ಇದರ ಜೊತೆಯಲ್ಲೇ ಅಯೋಧ್ಯೆಯಲ್ಲಿ ಬ್ರಹ್ಮ ಕಲಶೋತ್ಸವ ನಡೆಯುವ 48 ದಿನಗಳ ಅವಧಿಯಲ್ಲಿ ಭಕ್ತಾದಿಗಳು ರಜತ ಕಲಶೋತ್ಸವ ಮಾಡಿಸಬಹುದು. ಇದರ ವೆಚ್ಚ 1 ಲಕ್ಷ ರೂಪಾಯಿ. ಹಾಗಂತಾ ಎಲ್ಲರೂ ರಜತ ಕಲಶೋತ್ಸವ ನಡೆಸೋಕೆ ಸಾಧ್ಯವಿಲ್ಲ. ಈ ಉತ್ಸವದ ಶುಲ್ಕ ರೂಪದಲ್ಲಿ ನೀಡುವ ಹಣಕ್ಕಿಂತಾ 10 ಪಟ್ಟು ಹೆಚ್ಚು ಹಣವನ್ನು ಸಮಾಜ ಸೇವೆಗೆ ವಿನಿಯೋಗ ಮಾಡಿದ್ದರೆ ಮಾತ್ರ ರಜತ ಕಲಶೋತ್ಸವ ನಡೆಸಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಅಯೋಧ್ಯೆ ಮಂಡಲ ಉತ್ಸವ ಡಾಟ್ ಕಾಮ್‌ನಲ್ಲಿ ಮಾಹಿತಿ ಪಡೆಯಬಹುದು.

ನಿಮ್ಮೂರಲ್ಲೇ ಇದ್ದು ರಾಮಮಂದಿರ ಕಣ್ತುಂಬಿಕೊಳ್ಳಿ! ರಾಮ ಧ್ಯಾನ ಮರೆಯಬೇಡಿ!

ಎಲ್ಲಿಯ ಅಯೋಧ್ಯೆ, ಎಲ್ಲಿಯ ಕರ್ನಾಟಕ.. ಅಷ್ಟು ದೂರ ಹೋಗೋಕೆ ಸಾಕಷ್ಟು ಹಣ ಬೇಕು, ಸಮಯ ಬೇಕು, ಉದ್ಯೋಗಸ್ಥರಿಗೆ ರಜೆ ಬೇಕು. ಇನ್ನು ವೃದ್ಧರಿಗೆ, ನಿಶ್ಯಕ್ತರಿಗೆ, ರೋಗಿಗಳಿಗೆ ಅಯೋಧ್ಯೆ ತಲುಪಲು ಸಾಧ್ಯವೇ? ಈ ಚಿಂತೆ ಬೇಡವೇ ಬೇಡ.. ಏಕೆಂದರೆ, ಎಲ್ಲ ಟಿವಿ ಚಾನಲ್‌ಗಳಲ್ಲೂ ಅಂದು ರಾಮ ಮಂದಿರ ಉದ್ಘಾಟನೆಯ ದೃಶ್ಯಗಳನ್ನ ಕಣ್ತುಂಬಿಕೊಳ್ಳಬಹುದು. ವೆಬ್‌ಸೈಟ್‌ಗಳಲ್ಲಿ ಉದ್ಘಾಟನೆಯ ವಿಡಿಯೋಗಳನ್ನೂ ನೋಡಬಹುದು. ಬಂಧು ಮಿತ್ರರ ಜೊತೆಗೆ ಶೇರ್ ಮಾಡಿಕೊಳ್ಳಬಹುದು. ಹಾಗಂತಾ ನಿಮ್ಮ ರಾಮ ಭಕ್ತಿ ಇಷ್ಟಕ್ಕೇ ಸೀಮಿತ ಆಗಬೇಕಿಲ್ಲ.

ಭಗವಾನ್ ಶ್ರೀರಾಮನ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ದಿನ, ನಿಮ್ಮ ಇಷ್ಟ ದೇವರ ಪೂಜೆ ಮಾಡಿ. ಜನವರಿ 22 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾಮೂಹಿಕ ಭಜನಾ ಕಾರ್ಯಕ್ರಮವನ್ನೂ ಆಯೋಜಿಸಬಹುದು. ನಿಮ್ಮ ಹಳ್ಳಿ, ಕಾಲೋನಿಯಲ್ಲಿ ಇರುವ ಯಾವುದೇ ದೇವಸ್ಥಾನದಲ್ಲಿ ರಾಮ ಭಕ್ತರೆಲ್ಲ ಒಟ್ಟಿಗೆ ಸೇರಿ ಭಜನೆ ಮಾಡಬಹುದು. ಶಂಖ, ಜಾಗಟೆಗಳ ಜೊತೆ ಘಂಟಾನಾದದ ಮೂಲಕ ಆರತಿ ಮಾಡಿ ನಿಮ್ಮೂರಿನಿಂದಲೇ ಅಯೋಧ್ಯಾ ಶ್ರೀರಾಮನ ಪ್ರಾರ್ಥನೆ ಮಾಡಬಹುದು.

ಶ್ರೀ ರಾಮ ಜಯ ರಾಮ ಜಯ ಜಯ ರಾಮ ಅನ್ನೋ ವಿಜಯ ಮಂತ್ರವನ್ನು ಸಾಮೂಹಿಕವಾಗಿ 108 ಬಾರಿ ಜಪಿಸಬೇಕು ಎಂದು ಶ್ರಿರಾಮ ಜನ್ಮ ಭೂಮಿ ಟ್ರಸ್ಟ್‌ ಭಕ್ತರಲ್ಲಿ ಮನವಿ ಮಾಡಿದೆ. ಜೊತೆಯಲ್ಲೇ ಹನುಮಾನ್ ಚಾಲೀಸಾ ಪಠಿಸಬಹುದು. ರಾಮಾಯಣದ ಸುಂದರ ಕಾಂಡದ ಅಧ್ಯಯನ ಮಾಡಬಹುದು. ರಾಮರಕ್ಷಾ ಸ್ತೋತ್ರ ಕೂಡಾ ಪಠಿಸಬಹುದಾಗಿದೆ. ಈ ಮೂಲಕ ನೀವು ವಿಶ್ವದ ಯಾವ ಮೂಲೆಯಲ್ಲೇ ಇದ್ದರೂ ಭಗವಾನ್ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು.

Rama Ashtakam | Vande Guru Paramparaam | Sooryagayathri & Kuldeep M Pai

Leave a Reply

error: Content is protected !!