ಕೊಕ್ಕಡ: ಕೌಕ್ರಾಡಿ-ಕೊಕ್ಕಡ ಸಂತ ಜೋನರ ದೇವಾಲಯದಲ್ಲಿ ಮಾತೆ ಮರಿಯ ಅವರ ಜನುಮ ದಿನ ಆಚರಣೆ ಮತ್ತು ತೆನೆ ಹಬ್ಬ ವಿಜೃಂಭಣೆಯಿಂದ ನಡೆಯಿತು.
ತೆನೆಗಳನ್ನು ಆಶೀರ್ವದಿಸುವ ಕಾರ್ಯವನ್ನು ವಂ.ಫಾ.ಅಶೋಕ್ ಡಿಸೋಜರವರು ನಡೆಸಿಕೊಟ್ಟರು.ಮಾತೆ ಮರಿಯರಿಗೆ ಪ್ರಷ್ಪಾರ್ಚನೆ ಕಾರ್ಯವನ್ನು ಚರ್ಚಿನ ಧರ್ಮಗುರುಗಳಾದ ವಂ.ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ನಡೆಸಿದರು. ವಂ.ಫಾ.ವಿನೀತ್ ವಿನ್ಸೆಂಟ್ ಪಿರೇರಾ ಅವರು ಸಹಕಾರ ನೀಡಿದರು.
ಸಂಭ್ರಮದ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು. ಬಲಿಪೂಜೆಯನ್ನು ಪ್ರಧಾನ ಯಾಜಕರಾಗಿ ಫಾ.ಅನಿಲ್ ಪ್ರಕಾಶ್ ಡಿಸಿಲ್ವಾರವರು ನಿರ್ವಹಿಸಿ ಪ್ರವಚನ ನೀಡಿದರು. ಸಹಯಾಜಕರಾಗಿ ಫಾ.ವಿನೀತ್ ವಿನ್ಸೆಂಟ್ ಪಿರೇರಾ ಮತ್ತು ಫಾ.ಅಶೋಕ್ ಡಿಸೋಜ ರವರು ವಿಧಿವಿಧಾನಗಳನ್ನು ನಡೆಸಿಕೊಟ್ಟರು. ನವದಿನದ ನೊವೇನಾ ಮತ್ತು ಹೂಗಳನ್ನು ಅರ್ಪಿಸಿದ ಮಕ್ಕಳನ್ನು ಹಾಗೂ ಹಿರಿಯರನ್ನು ಮತ್ತು ಸಿಹಿ ತಿಂಡಿ ಮತ್ತು ಕಬ್ಬು ನೀಡಿದ ದಾನಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿ ಅಭಿನಂದನೆ ಸಲ್ಲಿಸಿದರು.
ಬಲಿಪೂಜೆಯ ಬಳಿಕ ದೇವಾಲಯದ ನೂತನ ಜಾಲತಾಣವಾದ www.kokkadachurch.in ಅನ್ನು ಉದ್ಘಾಟಿಸಿ ಜಾಲತಾಣ ಸೃಷ್ಟಿಸಿದ ಸಿಲ್ವೆಸ್ಟರ್ ಡಿಸೋಜ ರಿಗೆ ಅಭಿನಂದಿಸಿ, ನೆನಪಿನ ಕಾಣಿಕೆ ನೀಡಿದರು. ದೇವಾಲಯದ ಪಾಲನಾ ಪರಿಷತ್ ಸದಸ್ಯರಿಗೆ ಗೌರವ ಪೂರ್ವಕವಾಗಿ ಧರ್ಮಗುರುಗಳು ತೆನೆಗಳನ್ನು ವಿತರಿಸಿದರು. ಭಕ್ತಾದಿಗಳಿಗೆ ಆರು ವಾಳ್ಯಗಳ ಗುರಿಕಾರರು ತೆನೆಯನ್ನು ಹಂಚಿದರು. ದೇವಾಲಯದ ಆವರಣದಲ್ಲಿ ವೈಸಿಎಸ್ ಹಾಗೂ ಐಸಿವೈಎಂ ಸದಸ್ಯರು ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವೈಸಿಎಸ್ ಹಾಗೂ ಐ ಸಿ ವೈ ಎಂ ಸದಸ್ಯರು ಎಲ್ಲರಿಗೂ ಕಬ್ಬು ವಿತರಿಸಿದರು. ಯುವಕರ ಬ್ರಾಸ್ ಬ್ಯಾಂಡ್ ವಾದನದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.