ರಾಷ್ಟ್ರೀಕೃತ ಬ್ಯಾಂಕೊಂದರ ಕೊಕ್ಕಡ ಶಾಖೆ ವಿರುದ್ಧ ಪ್ರತಿಭಟನೆ: ಭರವಸೆಯ ಮೇರೆಗೆ ತಾತ್ಕಾಲಿಕ ಹಿಂತೆಗೆತ

ಶೇರ್ ಮಾಡಿ

ಕೊಕ್ಕಡ : ರಾಷ್ಟ್ರೀಕೃತ ಬ್ಯಾಂಕೊಂದರ ಕೊಕ್ಕಡ ಶಾಖೆಯಲ್ಲಿ ಗ್ರಾಹಕರಿಗೆ ಆಗುತ್ತಿರುವ ಹಲವಾರು ತೊಂದರೆಗಳ ವಿರುದ್ದ ಸೋಮವಾರ ಬೆಳಗ್ಗೆ 10ಗಂಟೆಗೆ ಬ್ಯಾಂಕ್ ಎದುರುಗಡೆ ಕೆನರಾ ಬ್ಯಾಂಕ್ ದೌರ್ಜನ್ಯ ವಿರೋಧೀ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿಯ ದರಣಿ ಸತ್ಯಾಗ್ರಹ ಪ್ರಾರಂಭ ಆಗಿ ಸಂಜೆ 7 ಗಂಟೆ ವರೆಗೂ ಮುಂದುವರೆದು, ಬ್ಯಾಂಕ್ ಅಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಕೊಟ್ಟ ಬೇಡಿಕೆ ಈಡೇರಿಸುವ ಭರವಸೆ ಮೇರೆಗೆ ದರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.

ಬ್ಯಾಂಕಿನಲ್ಲಿ ಕಳೆದ ವರ್ಷ ತನಕ ಸುಮಾರು 19 ವರ್ಷ ಸರಾಫರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪದ್ಮನಾಭ ಆಚಾರ್ಯರನ್ನು ಅನ್ಯಾಯವಾಗಿ ವಜಾ ಗೊಳಿಸಿದ್ದನ್ನು ಹಿಂಪಡೆದು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು, ಇಲ್ಲವೇ ಸೂಕ್ತ ತನಿಖೆ ನಡೆಸಿ ಅವರ ತಪ್ಪನ್ನು ಸಾಬೀತು ಮಾಡಿಕೊಡಬೇಕೆಂಬ ಬೇಡಿಕೆಗೆ ದೂರವಾಣಿ ಮೂಲಕ ಹೋರಾಟಗಾರರನ್ನು ಸಂಪರ್ಕಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಕವಿತ.ಎನ್ ಶೆಟ್ಟಿಅವರು ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಒದಗಿಸುವ ಭರವಸೆ ಕೊಟ್ಟರು. ಓಟಿಪಿ ಮೂಲಕ ಹಲವು ಗ್ರಾಹಕರ ಖಾತೆಗಳ ಲಕ್ಷಾಂತರ ಹಣ ಲಪಟಾಯಿಸಿರುವ ಬಗ್ಗೆಯೂ ತನಿಖೆಗೆ ಕ್ರಮಕೈಗೊಳ್ಳುವುದಾಗಿ ಲೀಡ್ ಬ್ಯಾಂಕ್ ಅಧಿಕಾರಿ ತಿಳಿಸಿದರು.

ಇನ್ನುಳಿದಂತೆ, ಬ್ಯಾಂಕ್ ನಲ್ಲಿ ಅನಕ್ಷರಸ್ಥ, ಅಸಹಾಯಕ ಗ್ರಾಹಕರು ಬಂದಾಗ ಬರೆದು ಕೊಡಲು ಒತ್ತಾಯಿಸದೆ ಬ್ಯಾಂಕ್ ನಿಂದಲೇ ಬರೆದು ಕೊಡುವ ವ್ಯವಸ್ಥೆ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಗ್ರಾಹಕರಿಗೆ ಸೌಜನ್ಯದ ಸೇವೆ ಒದಗಿಸಬೇಕೆಂಬ ಬೇಡಿಕೆಗೆ ಒಪ್ಪಿಗೆ ಸೂಚಿಸಿದರು. ಹಲವರ ಖಾತೆಯಿಂದ ಹಣ ಕಟ್ ಆಗುತ್ತಿರುವುದರ ಬಗ್ಗೆ ಸದ್ರಿ ಗ್ರಾಹಕರಿಗೆ ಈ ಬಗ್ಗೆ ಸರಿಯಾಗಿ ಪರಿಶೀಲಿಸಿ ಮನದಟ್ಟು ಮಾಡಿಸಿಕೊಡುವುದಾಗಿ ಒಪ್ಪಿದರು. ಹಿಂದೀ ಭಾಷಿಕರಿಂದಾಗಿ ಮುಂದೆ ಗ್ರಾಹಕರಿಗೆ ಸಮಸ್ಯೆ ಆಗದಂತೆ ಕ್ರಮವಹಿಸುವುದಾಗಿ ತಿಳಿಸಿದರು.

ಭರವಸೆ ಕೊಡಲಾದರೂ ಬ್ಯಾಂಕ್ ಅಧಿಕಾರಿಗಳು ಬಹಳ ತಡವಾಗಿ ಅಂದರೆ ಸಂಜೆ 4-45 ರ ಸುಮಾರಿಗೆ ಬಂದಿದ್ದರ ಬಗ್ಗೆ ದರಣಿ ಕೂತವರು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.‌ ಅಂತೂ ಕೊನೆಗೆ 7.15 ರ ತನಕ ಸತ್ಯಾಗ್ರಹಿಗಳು ಮತ್ತು ಬ್ಯಾಂಕ್ ಅಧಿಕಾರಿಗಳ ಮಾತುಕತೆ ನಡೆದು ಸರಿಪಡಿಸುವ ಭರವಸೆ ಕೊಡಲಾಯಿತು. ಈ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯು ತಾತ್ಕಾಲಿಕವಾಗಿ ದರಣಿ ಹಿಂಪಡೆದು, ಇದೇ ಬರುವ ನವೆಂಬರ್ 3ರ ವರೆಗೆ ಕಾದು, ಭರವಸೆ ಈಡೇರಿಕೆಯಲ್ಲಿ ಬ್ಯಾಂಕ್ ಅಧಿಕಾರಿಗಳು ವಿಫಲರಾದರೆ ನವೆಂಬರ್ 4 ರಿಂದ ಮತ್ತೆ ದರಣಿ ಮುಂದುವರೆಸುವುದಾಗಿ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಶಬರಾಯರು ತಿಳಿಸಿದರು.

One thought on “ರಾಷ್ಟ್ರೀಕೃತ ಬ್ಯಾಂಕೊಂದರ ಕೊಕ್ಕಡ ಶಾಖೆ ವಿರುದ್ಧ ಪ್ರತಿಭಟನೆ: ಭರವಸೆಯ ಮೇರೆಗೆ ತಾತ್ಕಾಲಿಕ ಹಿಂತೆಗೆತ

Leave a Reply

error: Content is protected !!