



ಉದನೆ: ಉದನೆ ಸೈಂಟ್ ಆಂಟನೀಸ್ ಪ್ರೌಢ ಶಾಲೆ ಹಾಗೂ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಜಂಟಿಯಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಿಸ್ತಿನಿಂದ ಹಾಗೂ ಉತ್ಸಾಹದಿಂದ ಆಚರಿಸಿದವು.
ಕಾರ್ಯಕ್ರಮದಲ್ಲಿ ಸೈಂಟ್ ಆಂಟನೀಸ್ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಶ್ರೀಧರ ಗೌಡ ಮಾತನಾಡಿ, “ಯೋಗ ದೇಹ ಮತ್ತು ಮನಸ್ಸನ್ನು ಶುದ್ಧಗೊಳಿಸುವ ಶ್ರೇಷ್ಠ ಮಾರ್ಗ. ಆರೋಗ್ಯಕರ ದೇಹಕ್ಕಾಗಿ ಸಮತೋಲನ ಆಹಾರ ಅಗತ್ಯವಿದ್ದರೆ, ಶುದ್ಧ ಮನಸ್ಸಿಗಾಗಿ ಉತ್ತಮ ನಡವಳಿಕೆ ಅತ್ಯವಶ್ಯ,” ಎಂದು ವಿದ್ಯಾರ್ಥಿಗಳಿಗೆ ನುಡಿದರು. ದೇಹ-ಮನಸ್ಸಿನ ಆರೋಗ್ಯದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ದೈಹಿಕ ಶಿಕ್ಷಣ ಶಿಕ್ಷಕರು ರಾಜೇಶ್ ರೈ ಹಾಗೂ ಜಿಮ್ಸನ್ ವರ್ಗೀಸ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಾನಾ ಯೋಗಾಸನಗಳನ್ನು ಪ್ರದರ್ಶಿಸಿದರು. ಈ ವೇಳೆ ಸಂಸ್ಥೆಯ ಸಂಚಾಲಕ ಫಾ.ಹನಿ ಜೇಕಬ್, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ಸಿಬಿಚ್ಚನ್ ಟಿ.ಸಿ, ಶಾಲಾ ಶಿಕ್ಷಕ ವೃಂದ ಹಾಗೂ ಅನೇಕ ವಿದ್ಯಾರ್ಥಿಗಳು ಹಾಜರಿದ್ದರು.







