ಕೊಕ್ಕಡ ಜನಸ್ಪಂದನೆ ಸಭೆ: ಅನುದಾನಕ್ಕೆ ತೊಂದರೆ, ಅಭಿವೃದ್ಧಿಗೆ ವಿಳಂಬ – ಹರೀಶ್ ಪೂಂಜ ಕಿಡಿ

ಶೇರ್ ಮಾಡಿ

ಕೊಕ್ಕಡ: “ಈ ಸರ್ಕಾರದಲ್ಲಿ ಅನುದಾನ ಎನ್ನುವುದು ಗೊತ್ತೇ ಇಲ್ಲ, ಎಲ್ಲವೂ ಗ್ಯಾರಂಟಿ ಯೋಜನೆಗೆ ಹಾರಿ ಹೋಗುತ್ತಿದೆ” ಎಂದು ಶಾಸಕ ಹರೀಶ್ ಪೂಂಜ ವಾಗ್ದಾಳಿ ನಡೆಸಿದರು. ಕೊಕ್ಕಡ ಅಂಬೇಡ್ಕರ್ ಭವನದಲ್ಲಿ ನಡೆದ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನೆ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರದ ಅವಧಿಯಲ್ಲಿ ಬೆಳ್ತಂಗಡಿ ತಾಲ್ಲೂಕಿಗೆ ₹3,500 ಕೋಟಿ ಅನುದಾನ ಬಂದಿದ್ದು, ಈಗ ನಿರಾಶಾಜನಕ ಪರಿಸ್ಥಿತಿ ಎದುರಾಗಿದೆ ಎಂದು ದೂರಿದರು.

ಸಭೆಯಲ್ಲಿ ಕೊಕ್ಕಡಕ್ಕೆ ನಕ್ಷೆ ಇಲ್ಲದ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಎಸೆದರೆ, ಶಾಸಕರು ಅಧಿಕಾರಿಗಳಿಗೆ ಪಟ್ಟಿ ನೀಡುವಂತೆ ಸೂಚನೆ ನೀಡಿ ಕ್ರಮಕ್ಕೆ ಭರವಸೆ ನೀಡಿದರು. ಶಾಲೆಗಳ ಬಗೆಯಲ್ಲೂ ಅನುದಾನ ಕೊರತೆಯ ಕಾರಣ “ವಿವೇಕ ಕೊಠಡಿ” ಯೋಜನೆ ಸ್ಥಗಿತಗೊಂಡಿದೆ ಎಂದರು.

ಲೈನ್ ಮ್ಯಾನ್‌ಗಳ ನೇಮಕ, ಪಿಡಿಒ ವರ್ಗಾವಣೆ, ಗ್ರಾ.ಪಂ ನಿರ್ಣಯ ತಿದ್ದುಪಡಿ, ಹಾಗೂ ಭದ್ರತಾ ವಿವಾದಗಳ ಬಗ್ಗೆಯೂ ಚರ್ಚೆ ನಡೆಯಿತು. ಪಶು ಆಸ್ಪತ್ರೆ ಸಿಬ್ಬಂದಿ ಕೊರತೆಯಿಂದ ಸೇವೆ ಸ್ಥಗಿತವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಸಕ್ರಮ ಅರ್ಜಿ ಸ್ಥಗಿತ: 900 ಅರ್ಜಿಗಳ ಪೈಕಿ ಬಹುಪಾಲು ಅರಣ್ಯ ಪ್ರದೇಶದಲ್ಲಿ ಇರುವುದು ವಿಳಂಬಕ್ಕೆ ಕಾರಣವಾಗಿದೆ ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಸ್ಪಷ್ಟಪಡಿಸಿದರು. ಶಾಸಕರು ಕೂಡಾ ಈಗ ನಿಯಮ ಬದಲಾಗಿದೆ, ಆಪ್‌ ಮೂಲಕ ಮಾತ್ರ ಅರ್ಜಿ ವಿಲೇವಾರಿ ಸಾಧ್ಯ ಎಂದು ತಿಳಿಸಿದರು.

ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ?
ಗ್ರಾಮಸ್ಥ ಅಬ್ದುಲ್ ರಜಾಕ್ ರಸ್ತೆಗಳ ದುಸ್ಥಿತಿಯನ್ನು ಉಲ್ಲೇಖಿಸಿ ಅಸಮಾಧಾನ ವ್ಯಕ್ತಪಡಿಸಿದಾಗ, “ಈ ಸರ್ಕಾರ ಎಲ್ಲ ಅನುದಾನ ಅಲ್ಪಸಂಖ್ಯಾತರಿಗೆ ಕೊಟ್ಟಿದೆ” ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದು ವಿವಾದಕ್ಕೆ ಕಾರಣವಾಯಿತು. ಗುತ್ತಿಗೆದಾರ ಅಬ್ದುಲ್ ಸಲಾಂ ಆಕ್ಷೇಪಿಸಿದರು. ಆದರೆ ಶಾಸಕರು ತಮ್ಮ ಮಾತನ್ನು ಸಮರ್ಥಿಸಿಕೊಂಡರು.

ಸಭೆಯಲ್ಲಿ ತಾ.ಪಂ.ಇಒ ಭವಾನಿ ಶಂಕರ್, ತಹಶೀಲ್ದಾರ್ ಪೃಥ್ವಿ ಸಾನಿಕಂ, ಪಿಡಿಒ ದೀಪಕ್ ರಾಜ್, ಗ್ರಾ.ಪಂ. ಅಧ್ಯಕ್ಷ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಮಾಜಿ ಅಧ್ಯಕ್ಷ ಯೋಗೀಶ್ ಆಳಂಬಿಲ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

  •  

Leave a Reply

error: Content is protected !!