


ನೆಲ್ಯಾಡಿ: ಪೆರಿಯಶಾಂತಿಯಿಂದ ಕುದ್ರಾಯದ ವರೆಗೆ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರಸ್ತೆಯ ಬದಿಯಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಶುಕ್ರವಾರ ಉಪ್ಪಿನಂಗಡಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗೂಡಂಗಡಿಯವರಿಗೆ ಮೌಖಿಕ ಆದೇಶ ನೀಡಿದ್ದಾರೆ.
ಸಾರ್ವಜನಿಕರೊಬ್ಬರು ಈ ಪ್ರದೇಶದಲ್ಲಿ ಗಂಭೀರವಾಗಿ ಪರಿಸರ ಉಲ್ಲಂಘನೆ ಆಗಿರುವ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಧೀನ ಕಚೇರಿಯಿಂದ ಬಂದ ನಿರ್ದೇಶನದಂತೆ ಈ ಕ್ರಮ ಕೈಗೆತ್ತಿಕೊಳ್ಳಲಾಗಿದೆ. ಕ್ರಮ ಕೈಗೊಳ್ಳಲು ಮುಂದಾದ ಅಧಿ ಕಾರಿಗಳಿಗೆ, ಅನಧಿಕೃತ ವ್ಯಾಪಾರಸ್ಥರು ಜುಲೈ 15ರ ಒಳಗಾಗಿ ಸ್ವತಃ ಗೂಡಂಗಡಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿ ಕಾಲಾವಕಾಶ ಕೇಳಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಸ್ತ ಶೆಟ್ಟಿ, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಾನಂದ, ಭವಾನಿ ಶಂಕರ್, ಅರಣ್ಯ ಪಾಲಕರಾದ ಸುನಿಲ್, ದಿವಾಕರ್ ರೈ, ದಿನೇಶ್, ಕೌಕ್ರಾಡಿ ಗ್ರಾ.ಪಂ.ಅಭಿವೃದ್ಧಿ ಅಧಿ ಕಾರಿ ದೇವಿಕಾ, ಪಂಚಾಯಿತಿ ಅಧ್ಯಕ್ಷ ಉದಯಕುಮಾರ್, ಸದಸ್ಯ ಮಹೇಶ್ ಮೊದಲಾದವರು ಭಾಗವಹಿಸಿದ್ದರು.
ಆದೇಶ ಬಂದ ಹಿನ್ನೆಲೆಯಲ್ಲಿ, ಖುದ್ದು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸುವ ಕುರಿತು ಮೌಖಿಕವಾಗಿ ಮಾಹಿತಿ ನೀಡಲಾಗಿದೆ. ವ್ಯಾಪಾರಸ್ಥರು ಜುಲೈ 15ರ ವರೆಗೆ ಕಾಲಾವಕಾಶ ಕೋರಿ ಮನವಿ ಸಲ್ಲಿಸಿದ್ದಾರೆ.
-ಹಸ್ತ ಶೆಟ್ಟಿ, ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಉಪ್ಪಿನಂಗಡಿ.
ರಸ್ತೆ ವಿಸ್ತರಣೆ ವೇಳೆ ಅಂಗಡಿಗಳನ್ನು ತೆರವುಗೊಳಿಸುತ್ತೇವೆ. ಇದುವರೆಗೆ ಅಂಗಡಿ ತೆರವಿಗೆ ಯಾವುದೇ ಅಧಿಕೃತ ನೋಟಿಸ್ ನೀಡಲಾಗಿಲ್ಲ. ಅಧಿಕಾರಿಗಳು ಬಂದು ಮಾತ್ರ ಮೌಖಿಕವಾಗಿ ಮಾಹಿತಿ ನೀಡಿದ್ದಾರೆ. ನಾವು ಕೆಲವು ಕಾಲಾವಕಾಶ ಕೇಳಿದ್ದೇವೆ. ಈಗ ಎಲ್ಲ ಸಮಸ್ಯೆ ಪರಿಹಾರವಾಗಿದೆ. ಮುಂದಿನ ಮೂರು ತಿಂಗಳೊಳಗೆ ಇಲ್ಲಿನ ರಸ್ತೆ ವಿಸ್ತರಣೆ ಕೆಲಸ ನಡೆಯಲಿದೆ. ಅದೇ ಸಂದರ್ಭ ನಾವು ಅಂಗಡಿಗಳನ್ನು ತೆರವುಗೊಳಿಸುತ್ತೇವೆ. ನಾವು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಲ್ಲ. ಈ ಪ್ರದೇಶ ನಿರ್ಜನವಾಗಿದ್ದು, ಅಂಗಡಿಗಳು ಸ್ಥಾಪಿತವಾದ ಬಳಿಕ ಇಲ್ಲಿ ಅಕ್ರಮ ಚಟುವಟಿಕೆಗಳು ನಿಂತಿವೆ. ಅಪಘಾತದ ವೇಳೆ ತುರ್ತು ಸೇವೆ ನೀಡಿದ್ದೇವೆ.
-ಶಿವಣ್ಣ ವ್ಯಾಪಾರಿ.









