

ನೆಲ್ಯಾಡಿ: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಆಲಂಪಾಡಿಯಲ್ಲಿ ಕುಟುಂಬ ಕಲಹವು ಗಂಭೀರ ರೂಪ ಪಡೆದು ಅಣ್ಣ, ತಮ್ಮಂದಿರ ನಡುವೆ ಕತ್ತಿಯಿಂದ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡ ಘಟನೆ ಘಟನೆ ಜು.16 ರಂದು ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ರಾಜಶೇಖರ್(37) ಎಂದು ಗುರುತಿಸಲಾಗಿದ್ದು ಅವರ ತಮ್ಮ ಮತ್ತು ಅಣ್ಣನಾದ ಮನೋಜ್ಕುಮಾರ್ ಮತ್ತು ಜಯರಾಜ್ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ರಾಜಶೇಖರ್ ಅವರು ಮನೆಯಲ್ಲಿ ಇರುವ ವೇಳೆ ಅವರ ತಮ್ಮ ಮನೋಜ್ ಕುಮಾರ್ ಅಸಭ್ಯ ಶಬ್ದಗಳಿಂದ ನಿಂದಿಸಿ ಇಬ್ಬರ ನಡುವೆ ವಾಗ್ವಾದ ತೀವ್ರವಾಗಿ ಮುಂದುವರಿದಾಗ ಈ ವೇಳೆಗೆ ಅಣ್ಣ ಜಯರಾಜ್ ಕತ್ತಿಯೊಂದನ್ನು ಹಿಡಿದುಕೊಂಡು ರಾಜಶೇಖರ್ರ ಮೇಲೆ ದಾಳಿ ನಡೆಸಿದನು. ದಾಳಿಯಿಂದ ರಾಜಶೇಖರ್ ರವರ ತಲೆ, ಹಣೆ, ಕೆನ್ನೆ, ಕೈ ಮತ್ತು ಕಾಲು ಸೇರಿ ಹಲವು ಅಂಗಾಂಗಗಳಿಗೆ ತೀವ್ರ ಗಾಯವಾಗಿದ್ದು. ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಘಟನೆಯ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಾಜಶೇಖರ್ ಅವರು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಮನೋಜ್ಕುಮಾರ್ ಮತ್ತು ಜಯರಾಜ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










