

ನೆಲ್ಯಾಡಿ: ಆಗಸ್ಟ್ 2ನೇ ಆದಿತ್ಯವಾರವನ್ನು ಭಾರತೀಯ ಬಿಷಪ್ ಮಂಡಳಿ ರಾಷ್ಟ್ರೀಯ ಯುವಜನರ ಆದಿತ್ಯವಾರವಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ನೆಲ್ಯಾಡಿ ಬಾಲಯೇಸು ದೇವಾಲಯದಲ್ಲಿಆದಿತ್ಯವಾರದಂದು ಭಕ್ತಿ ಮತ್ತು ಉತ್ಸಾಹಭರಿತವಾಗಿ ಕಾರ್ಯಕ್ರಮ ನಡೆಯಿತು.
ಧರ್ಮಗುರು ಫಾ.ಗ್ರೇಶನ್ ಅಲ್ವಾರೀಸ್ ಬಲಿಪೂಜೆಯನ್ನು ನೆರವೇರಿಸಿ, ಯುವಜನರ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಯುವಕರು ಪವಿತ್ರ ಸಭೆಯ ಭವಿಷ್ಯದ ಕಂಬಗಳಾಗಿದ್ದು, ದುರುಭ್ಯಾಸಗಳಿಗೆ ಒಳಗಾಗದೆ ಸಮಾಜಕ್ಕೆ ಆದರ್ಶವಾಗಬೇಕು ಎಂದು ಸಂದೇಶ ನೀಡಿದರು.
ಆ ದಿನದ ಲಿತುರ್ಜಿಯನ್ನು ದೇವಾಲಯದ ಯುವಜನರು ಸ್ವಯಂ ನೆರವೇರಿಸಿದರು. ಬಲಿಪೂಜೆಯ ನಂತರ ಯುವಜನರಿಗೆ ಆಟೋಟ ಸ್ಪರ್ಧೆಗಳು ಜರುಗಿದವು. ಕಾರ್ಯಕ್ರಮವನ್ನು ಫಾ.ಗ್ರೇಶನ್ ಅಲ್ವಾರೀಸ್, ಐಸಿವೈಎಂ ಸಚೇತಕಿ ಸಿ. ಲೀನಾ, ಪ್ರಶಾಂತ್ ನಿವಾಸ್ ಕಾನ್ವೆಂಟ್ ಸುಪಿರಿಯರ್ ಸಿ.ಜೆಸ್ಸಿ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. ಭಾಗವಹಿಸಿದವರಿಗೆ ಬೆಳಗಿನ ಉಪಹಾರ ನೀಡಲಾಯಿತು.










