ಸೌತಡ್ಕ: 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಣೆ

ಶೇರ್ ಮಾಡಿ

ಕೊಕ್ಕಡ: ಮಾನವೀಯತೆ ಜೀವಂತವಿರುವವರೆಗೆ ಸಮಾಜದಲ್ಲಿ ಆಶೆಯ ಬೆಳಕು ನಂದುವುದಿಲ್ಲ ಎಂಬುದನ್ನು ತೋರಿಸಿದಂತೆಯೇ ಸೌತಡ್ಕದ ಸೇವಾಧಾಮ ಪುನಶ್ಚೇತನ ಕೇಂದ್ರ ಮತ್ತೊಮ್ಮೆ ಹೃದಯ ಮುಟ್ಟುವ ಕಾರ್ಯ ಕೈಗೊಂಡಿದೆ. ಬೆಂಗಳೂರು “ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡಿಸಬಿಲಿಟಿ” ಯ ಸಹಕಾರದೊಂದಿಗೆ ಸೇವಾಭಾರತಿಯ ಅಂಗಸಂಸ್ಥೆ ಸೇವಾಧಾಮದ ವತಿಯಿಂದ ದೀಪಾವಳಿ ಹಬ್ಬದ ಸ್ಮರಣಾರ್ಥ 7 ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಗಾಲಿಕುರ್ಚಿ ವಿತರಿಸಲಾಯಿತು.

ಸೌತಡ್ಕದ ಸೇವಾಧಾಮವು ಸೇವಾಭಾರತಿಯ ನಿಷ್ಠಾವಂತ ಪ್ರಯತ್ನದಿಂದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನಕ್ಕಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಆಸ್ಪತ್ರೆ ಸೌಲಭ್ಯ, ಮಾನಸಿಕ ಪ್ರೋತ್ಸಾಹ, ಆರೈಕೆ ಹಾಗೂ ಉದ್ಯೋಗ ತರಬೇತಿ ನೀಡುವ ಮೂಲಕ ಅನೇಕರ ಜೀವನಕ್ಕೆ ದಾರಿತೋರಿಸಿರುವ ಈ ಸಂಸ್ಥೆ “ಮನುಷ್ಯ ಸೇವೆ – ಮಧುಸೇವೆಯ ಸಮ” ಎಂಬ ತತ್ವವನ್ನು ಬದುಕುಮಾಡಿದೆ.

ಸೇವಾಧಾಮದ ವತಿಯಿಂದ ಗುರುತಿಸಲ್ಪಟ್ಟ ಫಲಾನುಭವಿಗಳಾದ ಶಿಬಾಜೆಯ ಮೋಹನ್ ಪಿ.ಬಿ, ಗುತ್ತಿಗಾರ ಮಹೇಶ್, ನಿಡ್ಲೆಯ ಚಂದ್ರಶೇಖರ ಭಟ್, ಪುತ್ತೂರಿನ ಜೈನಾಬಿ, ಬದಿಯಡ್ಕದ ಚಂದ್ರಶೇಖರ, ಕಡಬದ ಧನಂಜಯ, ಹಾಗೂ ಎರ್ಮಲಿನ ಯೋಗೀಶ್ ಅವರಿಗೆ ಗಾಲಿಕುರ್ಚಿಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುತ್ತೂರಿನ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ರೂಪಲೇಖ ಅವರು ಗಾಲಿಕುರ್ಚಿಗಳನ್ನು ಹಸ್ತಾಂತರಿಸಿ ಫಲಾನುಭವಿಗಳ ಮುಖದಲ್ಲಿ ನಗು ಮೂಡಿಸಿದರು. ಅವರು ಮಾತನಾಡಿ ದೈಹಿಕ ಅಸಮರ್ಥತೆ ಎಂದರೆ ಜೀವನದ ಅಂತ್ಯವಲ್ಲ. ಧೈರ್ಯ, ಆಶಾವಾದ ಮತ್ತು ಸಮಾಜದ ಬೆಂಬಲವೇ ನಿಜವಾದ ಶಕ್ತಿ ಎಂದರು. ಸೇವಾಧಾಮದ ಈ ಸಾಮಾಜಿಕ ಕಾರ್ಯವನ್ನು ಮೆಚ್ಚಿದರು.

ಈ ಸಂದರ್ಭ ಸೇವಾಧಾಮ ಸಂಸ್ಥಾಪಕರಾದ ಕೆ.ವಿನಾಯಕ ರಾವ್ ಅವರು ಸಂಸ್ಥೆಯ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿವರಿಸಿದರು ಮತ್ತು ದಿವ್ಯಾಂಗರ ಪುನಶ್ಚೇತನದಲ್ಲಿ ಸಹಕಾರ ನೀಡುವ ಎಲ್ಲರಿಗೂ ನಮ್ಮ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫಲಾನುಭವಿಗಳು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ, ಈ ಗಾಲಿಕುರ್ಚಿಗಳು ಕೇವಲ ಪ್ರಯಾಣದ ಸಾಧನಗಳಲ್ಲ; ಬದುಕಿನತ್ತ ಮುನ್ನಡೆಯ ಹೊಸ ನಂಬಿಕೆ ಎಂದು ಹೇಳಿದರು. ದಿವ್ಯಾಂಗ ಆರೈಕೆದಾರರು ಹಾಗೂ ಸೇವಾಧಾಮ ಸಿಬ್ಬಂದಿ ವರ್ಗದವರು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  •  

Leave a Reply

error: Content is protected !!