

ಕಡಬ: ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗಗಳ ವಾರ್ಷಿಕ ಕ್ರೀಡಾಕೂಟವು ವಿದ್ಯುಕ್ತವಾಗಿ ಶಾಲಾ ಕ್ರೀಡಾಂಗಣದಲ್ಲಿ ನೆರವೇರಿತು.

ಕಡಬ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹನೀಫ್ ಕೆ.ಎಂ. ಮುಖ್ಯ ಅತಿಥಿಗಳಾಗಿ ಆಗಮಿಸಿ, ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕ್ರೀಡೆಯು ಶಿಸ್ತು ಹಾಗೂ ಸಂಯಮವನ್ನು ಕಾಪಾಡಿಕೊಳ್ಳಲು ಅಗತ್ಯ, ಗ್ರಾಮೀಣ ಪ್ರತಿಭೆಗಳು ಕ್ರೀಡಾ ಕ್ಷೇತ್ರದಲ್ಲಿ ಬೆಳಗಿದಾಗ ರಾಷ್ಟ್ರದ ಕ್ರೀಡಾ ಪ್ರಗತಿ ಸಾಧ್ಯ, ಈ ದಿಶೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಶಿಕ್ಷಣ ಸಂಸ್ಥೆಗಳ ಮೂಲಕ ಹೆಚ್ಚು ಹೆಚ್ಚು ಆಯೋಜನೆಗೊಳ್ಳಬೇಕೆಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸೈಂಟ್ ಜೋಕಿಮ್ಸ್ ವಿದ್ಯಾಸಂಸ್ಥೆಗಳ ಸಂಚಾಲಕರಾದ ವಂ.ಪ್ರಕಾಶ್ ಪಾವ್ಲ್ ಡಿ’ಸೋಜಾ ಅವರು ಧ್ವಜಾರೋಹಣ ನೆರವೇರಿಸಿ, ಕ್ರೀಡೆಯು ವಿದ್ಯಾರ್ಥಿಗಳ ಸರ್ವಾಂಗೀಣ ಸಾಮರ್ಥ್ಯವನ್ನು ಹೆಚ್ಚಿಸುವುದರಿಂದ ಹೆಚ್ಚು ಹೆಚ್ಚು ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಅವಶ್ಯಕ ಎಂದು ಹೇಳಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ವಿದ್ಯಾರ್ಥಿ ನಾಯಕ ಡ್ಯಾನಿ ದಿನೀಶ್ ಮುಖಂಡತ್ವದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾ ನಾಯಕ ಮಹಮದ್ ಸವಾದ್ ಪ್ರಮಾಣವಚನ ಬೋಧಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಸೈಂಟ್ ಜೋಕಿಮ್ಸ್ ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜೆಸಿಂತಾ ವೇಗಸ್, ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲಾ ಪ್ರಾಂಶುಪಾಲರಾದ ವಂ. ಸುನಿಲ್ ಪ್ರವೀಣ್ ಪಿಂಟೋ, ಸೈಂಟ್ ಆನ್ಸ್ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ದಕ್ಷಾ, ಸೈಂಟ್ ಜೋಕಿಮ್ಸ್ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಹಿಲ್ಡಾ ರೋಡ್ರಿಗಸ್, ರಕ್ಷಕ ಶಿಕ್ಷಕ ಸಮಿತಿಯ ಕಾಲೇಜು ವಿಭಾಗದ ಉಪಾಧ್ಯಕ್ಷರಾದ ಅಶ್ರಫ್ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಉಪಾಧ್ಯಕ್ಷರಾದ ಯುನುಸ್ ಉಪಸ್ಥಿತರಿದ್ದರು.
ಸೈಂಟ್ ಜೋಕಿಮ್ಸ್ ಕಾಲೇಜು ಪ್ರಾಂಶುಪಾಲರಾದ ಕಿರಣ್ ಕುಮಾರ್ ಸ್ವಾಗತಿಸಿ, ಸೈಂಟ್ ಜೋಕಿಮ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಲತಾ ವಂದಿಸಿದರು. ಸೈಂಟ್ ಜೋಕಿಮ್ಸ್ ಕಾಲೇಜು ಉಪನ್ಯಾಸಕ ರಾಜೇಶ್ ಎನ್ ನಿರೂಪಿಸಿದರು.






