ಎಸ್‌ಎಂವೈಎಂ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸ್ವಚ್ಛತಾ ಅಭಿಯಾನ

ಶೇರ್ ಮಾಡಿ
ಎಸ್‌ಎಂವೈಎಂ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸ್ವಚ್ಛತಾ ಅಭಿಯಾನ

ನೆಲ್ಯಾಡಿ: ಪೇಟೆಯ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವ ಉದ್ದೇಶದಿಂದ ನೆಲ್ಯಾಡಿಯ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋಮಲಬಾರ್ ಯೂತ್ ಮೂವ್ಮೆಂಟ್ ವತಿಯಿಂದ “ಗ್ರೀನ್ ಸಿಟಿ – ಕ್ಲೀನ್ ಸಿಟಿ” ಅಭಿಯಾನದ ಅಂಗವಾಗಿ ವಿಶೇಷ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸಲಾಯಿತು.

ನೆಲ್ಯಾಡಿ ಪೇಟೆ ಇತ್ತೀಚಿನ ದಿನಗಳಲ್ಲಿ ಹೈವೇ ನಿರ್ಮಾಣ ಕಾಮಗಾರಿಗಳು, ಕಿರಿದಾದ ರಸ್ತೆಗಳು ಹಾಗೂ ಇಕ್ಕೆಲಗಳಲ್ಲಿ ಹೆಚ್ಚಾಗುತ್ತಿರುವ ಕಸದ ರಾಶಿಗಳಿಂದ ಅಸ್ವಚ್ಛತೆಯ ಸಮಸ್ಯೆಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಸಮಾಜಕ್ಕೆ ಮಾದರಿಯಾಗುವ ಉದ್ದೇಶದಿಂದ ಯುವಕರು ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಪೇಟೆಯ ಪ್ರಮುಖ ಬೀದಿಗಳು ಹಾಗೂ ರಸ್ತೆ ಬದಿಗಳಲ್ಲಿ ಸಂಗ್ರಹವಾಗಿದ್ದ ಕಸವನ್ನು ಸಂಗ್ರಹಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯಿತು.

ಈ ಸ್ವಚ್ಛತಾ ಅಭಿಯಾನವನ್ನು ಸೀರೋಮಲಬಾರ್ ಯೂತ್ ಮೂವ್ಮೆಂಟ್ ಅಧ್ಯಕ್ಷ ತೋಮಸ್ ವಾಯಯಿಲ್ ಉದ್ಘಾಟಿಸಿದರು.

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನ ಧರ್ಮಗುರು ವಂ.ಫಾ.ಶಾಜಿ ಮಾತ್ಯು ಅವರು ಮಾತನಾಡಿ “ಪೇಟೆಯ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು ಕೇವಲ ಕೆಲವರ ಕರ್ತವ್ಯವಲ್ಲ ಸಾರ್ವಜನಿಕರು, ಗ್ರಾಹಕರು ಹಾಗೂ ಸ್ಥಳೀಯ ಗ್ರಾಮಾಡಳಿತ ಎಲ್ಲರೂ ಸೇರಿ ಕೈಜೋಡಿಸಿದಾಗ ಮಾತ್ರ ಪೇಟೆಯನ್ನು ಶಾಶ್ವತವಾಗಿ ಸ್ವಚ್ಛವಾಗಿರಿಸಲು ಸಾಧ್ಯ. ಪರಿಸರದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು,” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಚರ್ಚ್ ಟ್ರಸ್ಟಿಗಳಾದ ರೆಜಿ ಕೊಳಂಗರಾತ್, ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕನಾಟ್, ಜೋಯ್ ಪುತ್ತೇನ್ ಪರಂಭಿಲ್ ಸೇರಿದಂತೆ ಹಲವರು ಉಪಸ್ಥಿತರಿದ್ದು, ಯುವಕರ ಈ ಸಾಮಾಜಿಕ ಕಾರ್ಯವನ್ನು ಶ್ಲಾಘಿಸಿದರು.

ಈ ಸ್ವಚ್ಛತಾ ಅಭಿಯಾನದಲ್ಲಿ ಸೀರೋಮಲಬಾರ್ ಯೂತ್ ಮೂವ್ಮೆಂಟ್‌ನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪರಿಸರ ಸಂರಕ್ಷಣೆ ಮತ್ತು ಪೇಟೆಯ ಸ್ವಚ್ಛತೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು. ಸಮಾಜದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಯಿತು.

Leave a Reply

error: Content is protected !!