





ಕೊಕ್ಕಡ: ಶ್ರೀ ಮಹಾಕಾಳಿ, ಶ್ರೀ ಮಹಾಲಕ್ಷ್ಮೀ, ಶ್ರೀ ಮಹಾ ಸರಸ್ವತೀ ಸನ್ನಿಧಾನವಾದ ಕಾವು–ಕೌಕ್ರಾಡಿ ತ್ರಿಗುಣಾತ್ಮಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾ.23ರಂದು ಬ್ರಹ್ಮಶ್ರೀ ಎಡಮನೆ ಕೆ.ಯು.ಪದ್ಮನಾಭ ತಂತ್ರಿ ಅವರ ನೇತೃತ್ವದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ, ತ್ರಿಕಾಲ ಪೂಜೆ ಹಾಗೂ ಮಹಾದ್ವಾರ ಉದ್ಘಾಟನಾ ಸಮಾರಂಭವು ಭಕ್ತಿಭಾವದಿಂದ ನೆರವೇರಿತು.

ಸುಮಾರು ₹8 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮಹಾದ್ವಾರವನ್ನು ಬೆಳಿಗ್ಗೆ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಹಾದ್ವಾರ ನಿರ್ಮಾಣದಿಂದ ದೇವಸ್ಥಾನಕ್ಕೆ ಭಕ್ತರ ಆಗಮನ ಹೆಚ್ಚಾಗಲಿದೆ. ನಮ್ಮ ಹಿರಿಯರು ಸಂಸ್ಕೃತಿ, ಸಂಸ್ಕಾರ ಹಾಗೂ ಧರ್ಮವನ್ನು ಕಾಪಾಡಿಕೊಂಡು ಬಂದಿರುವುದರಿಂದ ಹಿಂದುತ್ವ ಉಳಿದಿದೆ. ಅದನ್ನು ಮುಂದಿನ ಪೀಳಿಗೆಯ ಯುವಕರು ಉಳಿಸಿ ಬೆಳೆಸುವ ಹೊಣೆಗಾರಿಕೆ ಅವರ ಮೇಲಿದೆ” ಎಂದು ತಿಳಿಸಿದರು.
ಹತ್ಯಡ್ತ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ಬರ್ಗುಳ ಮಾತನಾಡಿ, “ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದ ಈ ಮಹಾದ್ವಾರ ನಿರ್ಮಾಣ ಸಾಧ್ಯವಾಗಿದೆ. ಕೊಕ್ಕಡ ಭಾಗದ ಹಿಂದೂ ಯುವಕರ ಸಂಘಟಿತ ಶಕ್ತಿ ಇದಕ್ಕೆ ಕಾರಣವಾಗಿದೆ. ಗ್ರಾಮದ ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಸಾನ್ನಿಧ್ಯವನ್ನು ವೃದ್ಧಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾದ್ವಾರ ನಿರ್ಮಾಣ ಸಮಿತಿಯ ಅಧ್ಯಕ್ಷ ಧನಂಜಯ ಮೂಂಡುಬೈಲು ವಹಿಸಿದ್ದರು. ದೇವಸ್ಥಾನದ ಆಡಳಿತ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಪ್ರಸ್ತಾವಿಕವಾಗಿ ಮಾತನಾಡಿದರು.
ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಸೌತಡ್ಕ ನೈಮಿಷ ವೆಂಚರ್ಸ್ ಮಾಲಕ ಬಾಲಕೃಷ್ಣ ನೈಮಿಷ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ದೇವಸ್ಥಾನದ ಪ್ರಧಾನ ಅರ್ಚಕ ಜೆ.ಮಂಜುನಾಥ ಭಟ್ ಉಪಸ್ಥಿತರಿದ್ದರು.
ಸನ್ಮಾನ:
ಮಹಾದ್ವಾರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ ಶಿಲ್ಪಿ ಉಮೇಶ್ ಗೌಡ, ಕುಶಾಲಪ್ಪ ಗೌಡ, ಉದಯ ಗೌಡ, ಪೈಂಟರ್ ಸುರೇಶ್ ಹರೀಶ್ ಹಾಗೂ ಕರಸೇವಕರಾಗಿ ಸೇವೆ ಸಲ್ಲಿಸಿದ ಸ್ವಯಂಸೇವಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಜನಾರ್ದನ ಮೂಂಡುಬೈಲು ಸ್ವಾಗತಿಸಿದರು. ಕೇಶವ ಹಳ್ಳಿಗೇರಿ ನಿರೂಪಿಸಿದರು. ಡಾ. ಗಣೇಶ್ ಪ್ರಸಾದ್ ವಂದಿಸಿದರು.
ವಾರ್ಷಿಕ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ತ್ರಿಕಾಲ ಪೂಜೆ, ಮಂಗಳಾರತಿ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, ಸರ್ವ ಕಲಶಾಭಿಷೇಕ, ನಾಗತಂಬಿಲ ನಡೆಯಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನೆರವೇರಿತು. ಸಂಜೆ ರಂಗಪೂಜೆ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪವಿತ್ರ ಪಾಣಿ ಸೂರ್ಯನಾರಾಯಣ ಯಡಿಪಡಿತ್ತಾಯ, ದೇವಸ್ಥಾನದ ಆಡಳಿತ ಟ್ರಸ್ಟ್ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಮತ್ತು ಸದಸ್ಯರು, ಉತ್ಸವ ಸಮಿತಿ ಅಧ್ಯಕ್ಷ ದೇವರಾಜ್ ಹೊಸವಕ್ಲು ಮತ್ತು ಸದಸ್ಯರು, ದುರ್ಗವಾಹಿನಿ ಮಹಿಳಾ ತಂಡದ ಅಧ್ಯಕ್ಷೆ ಶಶಿಕಲಾ ಮತ್ತು ಸದಸ್ಯರು, ಮಹಾದ್ವಾರ ನಿರ್ಮಾಣ ಸಮಿತಿಯ ಅಧ್ಯಕ್ಷ ಧನಂಜಯ ಮೂಂಡುಬೈಲು ಮತ್ತು ಸದಸ್ಯರು, ಯುವಕೇಸರಿ ಅಧ್ಯಕ್ಷ ರಘು ಗೌಡ ಮತ್ತು ಸದಸ್ಯರು ಸೇರಿದಂತೆ ಅನೇಕ ಭಕ್ತಾದಿಗಳು ಭಾಗವಹಿಸಿದರು.





