





ಕೊಕ್ಕಡ : ಕೌಕ್ರಾಡಿ ಸಂತ ಜೋನರ ದೇವಾಲಯದಲ್ಲಿ ಮಾ.29ರಂದು ಭಕ್ತಿಭಾವದಿಂದ ಗರಿಗಳ ಭಾನುವಾರ ವಿಶೇಷವಾಗಿ ಆಚರಿಸಲಾಯಿತು. ಕ್ರೈಸ್ತ ಸಮುದಾಯದ ಪವಿತ್ರ ಪಾಸ್ಕ ಹಬ್ಬದ ಪೂರ್ವಭಾವಿಯಾಗಿ ಆಚರಿಸಲ್ಪಡುವ ಈ ಮಹತ್ವದ ದಿನವನ್ನು ಭಕ್ತರು ಅಪಾರ ಶ್ರದ್ಧೆ ಮತ್ತು ಭಾವಪೂರ್ಣತೆಯಿಂದ ಆಚರಿಸಿದರು.
ಈ ಪವಿತ್ರ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪ್ರಾರ್ಥನಾ ವಿಧಿ ಹಾಗೂ ಬಲಿಪೂಜೆಯನ್ನು ಪ್ರಧಾನ ಧರ್ಮಗುರು ವಂ.ಫಾ.ಅನಿಲ್ ಪ್ರಕಾಶ್ ಡಿಸಿಲ್ವಾ ಅವರು ಭಕ್ತಿಪೂರ್ವಕವಾಗಿ ಅರ್ಪಿಸಿದರು. ಸೇವಾದರ್ಶಿಯಾಗಿ ವಿಲ್ಫ್ರೆಡ್ ಸ್ಟೀವನ್ ರೊಡ್ರಿಗಸ್ ಅವರು ಸಹಭಾಗಿಯಾಗಿ ದೇವಸನ್ನಿಧಿಯಲ್ಲಿ ಸೇವೆ ಸಲ್ಲಿಸಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಭಕ್ತಾಧಿಗಳು ತೆಂಗಿನ ಗರಿಗಳನ್ನು ಕೈಯಲ್ಲಿ ಹಿಡಿದು ಸ್ತುತಿಗೀತೆಗಳನ್ನು ಹಾಡುತ್ತಾ ಚರ್ಚ್ ಆವರಣದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದರು. ಈ ಮೆರವಣಿಗೆ ಶ್ರದ್ಧೆ, ಶಾಂತಿ ಮತ್ತು ಸಮರ್ಪಣೆಯ ಭಾವನೆಗಳನ್ನು ಪ್ರತಿಬಿಂಬಿಸುವಂತೆ ಸಾಗಿದ್ದು, ಎಲ್ಲರ ಮನಸ್ಸಿಗೆ ಆಧ್ಯಾತ್ಮಿಕ ಉತ್ಸಾಹ ತುಂಬಿತು.
ಈ ಸಂದರ್ಭದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಶಾಂತಿಪ್ರಿಯ ಡಿಸೋಜಾ, ಕಾರ್ಯದರ್ಶಿ ಲವಿನಾ ಡಿಸೋಜಾ, ವಿವಿಧ ವಾಳ್ಯದ ಗುರಿಕಾರರು ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದರು.




