





ಮಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಮಂಗಳೂರಿನ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸ್ ನಿರೀಕ್ಷಕ ಚಂದ್ರಶೇಖರ ಕೆ.ಎನ್ ನೀಡಿದ ಸೋರ್ಸು ವರದಿ ಆಧರಿಸಿ ಏ.6ರಂದು ಮಂಗಳೂರು ಲೋಕಾಯುಕ್ತ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಲೋಕಾಯುಕ್ತ ಎಸ್ ಪಿ ಬಿ.ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಳಾದ ಡಾ.ಗಾನ ಪಿ, ಸುರೇಶ್ ಕುಮಾರ್ ಮತ್ತು ತಂಡದ ಆರು ಅಧಿಕಾರಿಗಳು ಮಂಗಳೂರು ಬೆಂಗಳೂರು ಹಾಗೂ ಬಾಗೇಪಲ್ಲಿಯ ಒಟ್ಟು ವಿವಿಧ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಅಂದಾಜು ರೂ.3,37,04,000 ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ ಇದರಲ್ಲಿ ಬೆಂಗಳೂರಿನ ನಿವಾಸ ಒಂದರಲ್ಲಿ ರೂ 23.64 ಲಕ್ಷ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳು ಪತ್ತೆಯಾಗಿವೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ಮನೆ ಮತ್ತು ವಾಣಿಜ್ಯ ಮಳಿಗೆಗಳು, ಬೆಂಗಳೂರಿನ ಪ್ಲಾಟ್ ಗಳು ಮತ್ತು ಮಂಗಳೂರಿನ ಕಚೇರಿ ಹಾಗೂ ನಿವಾಸದ ಮೇಲೆ ತಪಾಸಣೆ ನಡೆಸಲಾಗಿದೆ.
ಸದ್ಯ ಅಧಿಕಾರಿ ಬಾಬು ಬಿ.ಎನ್ ಅವರ ವಿರುದ್ಧ ತನಿಖೆ ಮುಂದುವರಿದಿದ್ದು ಹೆಚ್ಚಿನ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.




