ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ನಿವೃತ್ತ ಅಧಿಕಾರಿ: ನಿಡ್ಲೆ ಗ್ರಾ.ಪಂ. ದಂಡದ ಶಿಕ್ಷೆ

ಶೇರ್ ಮಾಡಿ

 

ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ನಿವೃತ್ತ ಅಧಿಕಾರಿ: ನಿಡ್ಲೆ ಗ್ರಾ.ಪಂ. ದಂಡದ ಶಿಕ್ಷೆ

ಕೊಕ್ಕಡ: ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದ ನಿವೃತ್ತ ಸರ್ಕಾರಿ ಅಧಿಕಾರಿಗೆ ನಿಡ್ಲೆ ಗ್ರಾಮ ಪಂಚಾಯತ್ ದಂಡ ವಿಧಿಸಿದ ಘಟನೆ ಗ್ರಾಮದಲ್ಲಿ ನಡೆದಿದೆ.

ನಿಡ್ಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏ.4ರಂದು ಸ್ವಚ್ಛತಾ ಶನಿವಾರ ಕಾರ್ಯಕ್ರಮದ ಅಂಗವಾಗಿ ಕುದ್ರಾಯದಿಂದ ಬರೆಂಗಾಯವರೆಗೆ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕೈರೋಳಿ ಪ್ರದೇಶದ ರಸ್ತೆಯ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗಿರುವುದು ಪತ್ತೆಯಾಯಿತು. ತ್ಯಾಜ್ಯ ವಸ್ತುಗಳ ಪರಿಶೀಲನೆಯ ಸಂದರ್ಭದಲ್ಲಿ ದೊರೆತ ದಾಖಲೆಗಳ ಆಧಾರದ ಮೇಲೆ, ನಿಡ್ಲೆ ಗ್ರಾಮದ ಕಲ್ಲಿಮಾರು ನಿವಾಸಿ ವೆಂಕಪ್ಪ ಗೌಡ ಅವರು ತಮ್ಮ ಮನೆಯಿಂದ ಹಳೆಯ ತ್ಯಾಜ್ಯ ವಸ್ತುಗಳನ್ನು ತಂದು ಸಾರ್ವಜನಿಕ ಸ್ಥಳದಲ್ಲಿ ಎಸೆದಿರುವುದು ಬಹಿರಂಗವಾಯಿತು.

ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದವರಾಗಿರುವುದರಿಂದ, ಸ್ವಚ್ಛತೆಯ ಬಗ್ಗೆ ಹೆಚ್ಚು ಜವಾಬ್ದಾರಿತನ ತೋರಬೇಕಾಗಿತ್ತು ಎಂದು ಪಂಚಾಯತ್ ಅಧಿಕಾರಿಗಳು ಸೂಚಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವ ಮೂಲಕ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ನಿಡ್ಲೆ ಗ್ರಾಮ ಪಂಚಾಯತ್ ವತಿಯಿಂದ ರೂ. 1,035 ದಂಡ ವಿಧಿಸಿ ನೋಟಿಸ್ ಜಾರಿಗೊಳಿಸಲಾಗಿದೆ.

ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕರಿಗೆ ಸ್ವಚ್ಛತೆ ಕಾಪಾಡುವಂತೆ ಹಾಗೂ ತ್ಯಾಜ್ಯವನ್ನು ಸೂಕ್ತ ಸ್ಥಳದಲ್ಲೇ ವಿಲೇವಾರಿ ಮಾಡುವಂತೆ ಮನವಿ ಮಾಡಲಾಗಿದೆ.

 

Leave a Reply

error: Content is protected !!