ಶಿರಾಡಿ: ಮನೆಗೆ ಬೀಗ ಹಾಕಿ ಚರ್ಚ್‌ಗೆ ತೆರಳಿದ್ದ ವೇಳೆ 34 ಗ್ರಾಂ ಚಿನ್ನಾಭರಣ ಕಳವು

ಶೇರ್ ಮಾಡಿ

 

ಶಿರಾಡಿ: ಮನೆಗೆ ಬೀಗ ಹಾಕಿ ಚರ್ಚ್‌ಗೆ ತೆರಳಿದ್ದ ವೇಳೆ 34 ಗ್ರಾಂ ಚಿನ್ನಾಭರಣ ಕಳವು

ನೆಲ್ಯಾಡಿ: ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಚರ್ಚ್‌ಗೆ ತೆರಳಿದ್ದ ವೇಳೆ ಕಳ್ಳರು ಭಾನುವಾರದಂದು ಬೆಳಗ್ಗೆ ಮನೆಗೆ ನುಗ್ಗಿ ಸುಮಾರು 34 ಗ್ರಾಂ ತೂಕದ ಚಿನ್ನಾಭರಣ ಕಳವು ಮಾಡಿಕೊಂಡು ಹೋದ ಘಟನೆ ಕಡಬ ತಾಲೂಕಿನ ಶಿರಾಡಿ ಗ್ರಾಮದ ಕಲಪಾರು ತೈಲ್ ಮನೆಯಲ್ಲಿ ನಡೆದಿದೆ.

ಮನೆಯ ಮಾಲೀಕರಾದ ಟಿ.ಜೆ. ಕುರಿಯಕೋಸ್ (65) ಅವರು ತಮ್ಮ ಪತ್ನಿ ಹಾಗೂ ಮಗನೊಂದಿಗೆ ಭಾನುವಾರ ಬೆಳಿಗ್ಗೆ 7.45 ಗಂಟೆಗೆ ಮನೆಗೆ ಬೀಗ ಹಾಕಿ ಚರ್ಚ್‌ಗೆ ತೆರಳಿದ್ದರು. ಬೆಳಿಗ್ಗೆ 9.30 ಗಂಟೆಗೆ ಮನೆಗೆ ಮರಳಿದಾಗ ಮನೆಯ ಹಿಂಬದಿಯ ಬಾಗಿಲು ಮುರಿದು ಒಳನುಗ್ಗಿರುವುದು ಕಂಡುಬಂದಿದೆ.

ತಕ್ಷಣ ಮನೆಯೊಳಗೆ ಪರಿಶೀಲನೆ ನಡೆಸಿದ ವೇಳೆ ಬೆಡ್‌ರೂಮ್‌ನಲ್ಲಿದ್ದ ಕಬ್ಬಿಣದ ಕಪಾಟಿನೊಳಗಿನ ಚಿನ್ನಾಭರಣ ಇರಿಸಿದ್ದ ಕಬ್ಬಿಣದ ಬಾಕ್ಸ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಕಳವಾದ ಬಾಕ್ಸ್‌ನಲ್ಲಿ ಸುಮಾರು 10 ಗ್ರಾಂ ತೂಕದ ಚಿನ್ನದ ಸರ, 2 ಗ್ರಾಂ ತೂಕದ ಚಿನ್ನದ ಉಂಗುರ, 10 ಗ್ರಾಂ ತೂಕದ ಚಿನ್ನದ ಬಳೆ, 4 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌ನ ತುಂಡಾದ ಭಾಗ ಹಾಗೂ 8 ಗ್ರಾಂ ತೂಕದ ಎರಡು ಜೋಡಿ ಚಿನ್ನದ ಬೆಂಡೋಲೆಗಳು ಸೇರಿದಂತೆ ಒಟ್ಟು ಸುಮಾರು 34 ಗ್ರಾಂ ತೂಕದ ಹಳೆಯ ಚಿನ್ನಾಭರಣಗಳಿದ್ದು, ಅವುಗಳ ಅಂದಾಜು ಮೌಲ್ಯ ರೂ.1,44,500 ಎಂದು ತಿಳಿದುಬಂದಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

 

Leave a Reply

error: Content is protected !!