











ಸುಬ್ರಹ್ಮಣ್ಯ: ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರವಿವಾರ ಎನೇಕಲ್ ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ಜರಗಿತು.
ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋಹಿತ್ ಬಿ.ಬಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ರಾಷ್ಟ್ರದ ರಾಷ್ಟ್ರಪತಿಯಿಂದ ಹಿಡಿದು ಗ್ರಾಮ ಪಂಚಾಯತ್ ವರೆಗೆ ತಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಆಡಳಿತ ನಡೆಸುವಲ್ಲಿ ಸಫಲರಾಗಿದ್ದಾರೆ. ಮಹಿಳೆ ಅಬಲೆಯಲ್ಲ, ಸಬಲೆ ಹಾಗೂ ತನ್ನ ಸ್ವಂತ ದುಡಿಮೆಯಿಂದ ಇಂದು ಸ್ವಉದ್ಯೋಗದೊಂದಿಗೆ ಸ್ವಾವಲಂಬಿ ಜೀವನವನ್ನು ಅನೇಕ ಮಹಿಳೆಯರನ್ನು ನಾವು ಕಾಣಬಹುದು. ಆದ್ದರಿಂದ ಮಹಿಳೆಯರಿಗೆ ಸಮಾಜದಲ್ಲಿ ಇನ್ನೂ ಹೆಚ್ಚಿನ ಗೌರವ ಸ್ಥಾನ- ಮಾನ ಹೆಚ್ಚೆಚ್ಚು ಸಿಗಲಿ ಎಂದು ಹಾರೈಸುತ್ತೇನೆ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸುಳ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷೆ ಲತಾ ಮಧುಸೂದನ್ ಅವರು ಮಾತನಾಡುತ್ತಾ ನಾವೆಲ್ಲ ಸ್ತ್ರೀಯರು ಸ್ತ್ರೀಯರಿಗೆ ನಮ್ಮದೇ ಆದ ಕುಟುಂಬದ ಜವಾಬ್ದಾರಿ ಇದೆ. ಅದರೊಂದಿಗೆ ಸಮಾಜಕ್ಕೆ ಒಂದಷ್ಟು ಸೇವೆಯ ಮೂಲಕ ನಿಭಾಯಿಸುವ ತುಡಿತ ನಮ್ಮೆಲ್ಲರಿಗಿದೆ. ಅದೊಂದು ಆಕಾಂಕ್ಷೆ ಕೂಡ, ನಿಜ. ತಾವೆಲ್ಲರೂ ಸಮಾಜಕ್ಕೆ ಸೇವೆ ಮಾಡಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಸಹಜ ಆಕಾಂಕ್ಷೆಯೊಂದಿಗೆ ನಾವೆಲ್ಲರೂ ಇನ್ನರ್ವೇಲ್ ಸದಸ್ಯರಾಗಿದ್ದೇವೆ ಎಂದರು.
ಆರಂಭದಲ್ಲಿ ಸಭಾಧ್ಯಕ್ಷತೆಯನ್ನು ಇನ್ನರ್ವೇಲ್ ಕ್ಲಬ್ ಅಧ್ಯಕ್ಷೆ ವಿಮಲ ರಂಗಯ್ಯ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಶೋಭಾ ಗಿರಿಧರ್ ಅವರು ವಿಸ್ತೃತವಾದ ವರದಿಯನ್ನು ವಾಚಿಸಿದರು. ನೂತನ ಅಧ್ಯಕ್ಷೆ ಸೌಮ್ಯ ದಿನೇಶ್ ಅವರಿಗೆ ವಿಮಲ ರಂಗಯ್ಯ ಅವರು ಕಾಲರ್ ತೊಡಿಸಿ, ದಂಡ ನೀಡಿ ಅಧಿಕಾರ ಹಸ್ತಾಂತರಿಸಿದರು. ಸರೋಜಾ ಮೈಲಪ್ಪ ಪ್ರಾರ್ಥಿಸಿದರು. ಸಚಿತ ಗೋಪಾಲ ಹಾಗೂ ಜಾನಕಿ ವೆಂಕಟೇಶ್ ಅತಿಥಿಗಳನ್ನು ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉನ್ನತಮಟ್ಟದ ಅಂಕಗಳೊಂದಿಗೆ ತೇರ್ಗಡೆಗೊಂಡ ಇನ್ನರ್ವೇಲ್ ಸದಸ್ಯರ ಮಕ್ಕಳಾದ ಗೌರವ್, ಶ್ರಾವ್ಯ, ಪ್ರಾಪ್ತಿ, ಅಮೃತ, ಹಾಗೂ ನಿಖಿಲ್ ಅವರನ್ನು ಹಾಗೂ ಸಿ.ಎ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಿಧಿ ಅವರನ್ನು ಗೌರವಿಸಲಾಯಿತು. ಇನ್ನರ್ ವೇಲ್ ಸದಸ್ಯರಾದ ಅಕ್ಷತಾ ರಂಜನ್ ಹಾಗೂ ಸುನಿತಾ ನವೀನ್ ವಾಲ್ತಾಜೆ ಹಾಜರಿದ್ದರು. ಇದೇ ಸಂದರ್ಭದಲ್ಲಿ ಎಣ್ಣೆಮಜಲು ಅಂಗನವಾಡಿ ಕೇಂದ್ರಕ್ಕೆ ಮೇಜು ಖರೀದಿಗೆ ರೂಪಾಯಿ 5,000/= ಕೊಡುಗೆ ನೀಡಲಾಯಿತು. ನೂತನ ಇನ್ನರ್ ವೀಲ್ ಸದಸ್ಯೆಯಾಗಿ ಗಾಯತ್ರಿ ರೋಹಿತ್ ರವರನ್ನು ಸೇರ್ಪಡೆಗೊಳಿಸಲಾಯಿತು.
ಲೀಲಾ ವಿಶ್ವನಾಥ್ ನಡುತೋಟ ಕಾರ್ಯಕ್ರಮ ನಿರೂಪಿಸಿದರು, ಶ್ರೀಜಿಶ ಚಂದ್ರಶೇಖರ್ ವಂದಿಸಿದರು.



