










ನೆಲ್ಯಾಡಿ: ಜೆಸಿಐ ನೆಲ್ಯಾಡಿ ಘಟಕಕ್ಕೆ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿ ಕಾರ್ಯಕ್ರಮ ಭಾನುವಾರ ನೆಲ್ಯಾಡಿಯ ಗೌರಿಜಾಲ್ ಆರ್ಕೇಡ್ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಂಬರುವ ವಲಯ ಮಟ್ಟದ ಚಟುವಟಿಕೆಗಳು, ಘಟಕದ ಆಡಳಿತಾತ್ಮಕ ಬೆಳವಣಿಗೆ ಹಾಗೂ ಸದಸ್ಯರ ಸಂಘಟನಾ ಬಲವರ್ಧನೆ ಕುರಿತು ಸಮಗ್ರ ಚರ್ಚೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಘಟಕದ ಅಧ್ಯಕ್ಷೆ ಪ್ರವೀಣಿ ಸುಧಾಕರ್ ವಹಿಸಿ, ಆಗಮಿಸಿದ ಅತಿಥಿಗಳು ಹಾಗೂ ಸದಸ್ಯರನ್ನು ಸ್ವಾಗತಿಸಿದರು.
ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ ಅವರು ಮುಂಬರುವ ವಲಯ ಮಟ್ಟದ ಕಾರ್ಯಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು. ಜೊತೆಗೆ, ಮುಂದಿನ ಸಾಲಿನ ಘಟಕದ ಆಡಳಿತ ಮಂಡಳಿಯ ರಚನೆ, ನಾಯಕತ್ವ ವಿಕಸನ, ಸಂಘಟನೆಯ ಬೆಳವಣಿಗೆ ಹಾಗೂ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ಮತ್ತು ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಘಟಕದ ಸದಸ್ಯರ ಪುತ್ರ ಮಹಮ್ಮದ್ ಹಿಶಾಮ್ ಅವರು ಕರಾಟೆ ಹಾಗೂ ಕುಮಿಟೆ ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಜೆಸಿಐ ನೆಲ್ಯಾಡಿ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಜೆಸಿಐ ನೆಲ್ಯಾಡಿ ಘಟಕದ ಎಲ್ಲಾ ಸದಸ್ಯರು ಉಪಸ್ಥಿತರಿದರು, ಘಟಕದ ಕಾರ್ಯದರ್ಶಿ ನವ್ಯಪ್ರಸಾದ್ ವಂದಿಸಿದರು.



