ಬೆಳ್ತಂಗಡಿ: ಗಾಂಜಾ ಮಾರಾಟ ಜಾಲದ ಮೇಲೆ ಪೊಲೀಸ್ ದಾಳಿ: ಓರ್ವನ ಬಂಧನ, ಮತ್ತೋರ್ವ ಪರಾರಿ

ಶೇರ್ ಮಾಡಿ

 

ಬೆಳ್ತಂಗಡಿ: ಗಾಂಜಾ ಮಾರಾಟ ನಡೆಸುತ್ತಿದ್ದ ಆರೋಪದಡಿ ಓರ್ವನನ್ನು ಬಂಧಿಸಿ, ಮತ್ತೋರ್ವನ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ಬುಧವಾರ ರಾತ್ರಿ ನಡೆದಿದೆ.

ಬಂಧಿತ ಆರೋಪಿಯನ್ನು ತ್ವಲಹ್ ಅಲಿಯಾಸ್ ಅನ್ವರ್ ಎಂದು ಗುರುತಿಸಲಾಗಿದ್ದು, ಮತ್ತೋರ್ವ ಆರೋಪಿತ ಹಮ್ಜತ್ ಕರಾರ್ ಪರಾರಿಯಾಗಿದ್ದಾನೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸ್ ಉಪನಿರೀಕ್ಷಕ ಆನಂದ್ ಎಂ ನೇತೃತ್ವದ ಪೊಲೀಸ್ ತಂಡವು ಜುಲೈ 29ರಂದು ರಾತ್ರಿ ಸುಮಾರು 8 ಗಂಟೆಗೆ ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಪ್ರದೇಶದಲ್ಲಿ ವಾಹನ ತಪಾಸಣೆ ಹಾಗೂ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ, ಆಟೋ ರಿಕ್ಷಾ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯೊಬ್ಬ ಪೊಲೀಸ್ ವಾಹನವನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.ವಿಚಾರಣೆಯ ವೇಳೆ ಆತ ತನ್ನನ್ನು ತ್ವಲಹ್ ಅಲಿಯಾಸ್ ಅನ್ವರ್ ಎಂದು ಪರಿಚಯಿಸಿಕೊಂಡಿದ್ದು, ಪಿಲಿಚಂಡಿಕಲ್ಲು ನಿವಾಸಿ ಹಮ್ಜತ್ ಕರಾರ್ ಎಂಬಾತನಿಗೆ ₹20,000 ಮುಂಗಡ ಹಣ ನೀಡಿ 500 ಗ್ರಾಂ ಗಾಂಜಾ ಖರೀದಿಸಿದ್ದಾಗಿ ತಿಳಿಸಿದ್ದಾನೆ. ಅದೇ ದಿನ ಹಮ್ಜತ್ ಕರಾರ್ ಕಾರಿನಲ್ಲಿ ಗಾಂಜಾವನ್ನು ತಂದು ನೀಡಿದ್ದು, ಪೊಲೀಸರು ಬರುತ್ತಿರುವುದನ್ನು ಕಂಡು ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.

ಬಂಧಿತ ಆರೋಪಿ ತ್ವಲಹ್ ಅಲಿಯಾಸ್ ಅನ್ವರ್ ಅಲಿಯಾಸ್ ಅನ್ಸಾರ್ ಯನ್ನು ಜುಲೈ 30ರಂದು ಸಂಜೆ ಬೆಳ್ತಂಗಡಿ ಪೊಲೀಸರು ಮಂಗಳೂರಿನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಕಾರ್ಯಾಚರಣೆಯನ್ನು ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ, ಬೆಳ್ತಂಗಡಿ ಸಬ್ ಇನ್ಸ್‌ಪೆಕ್ಟರ್ ಆನಂದ್ ಎಂ. ಮತ್ತು ಸಿಕಂದರ್ ಪಾಷ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸತೀಶ್ ನಾಯ್ಕ್, ಪ್ರಕಾಶ್ ಪೂಜಾರಿ, ಶ್ರೀನಿವಾಸ್, ಹನುಮಂತ, ನಂದ, ಜಗದೀಶ್ ಅತ್ತಾಜೆ, ಪ್ರಮೋದ್, ದುಂಡಪ್ಪ ಪೂಜಾರಿ, ಶ್ರೀನಿವಾಸ್, ಚಾಲಕ ಸತೀಶ್ ಹಾಗೂ ಸೋಕೋ ತಂಡದ ಕಾವ್ಯಶ್ರೀ ಮತ್ತು ಅರ್ಪಿತಾ ಯಶಸ್ವಿಯಾಗಿ ನಡೆಸಿದರು.

 

Leave a Reply

error: Content is protected !!