ಜೆಸಿಐ ಆಲಂಕಾರಿನ ವತಿಯಿಂದ ತಾಲೂಕು ಮಟ್ಟದ – ‘ಕಲಿಕಾಮೃತ 2022-23’

ಶೇರ್ ಮಾಡಿ

ನೇಸರ ಸೆ.23: ಆಲಂಕಾರಿನ ದೀನ ದಯಾಳು ಸಭಾಭವನದಲ್ಲಿ ಕಲಿಕಾಮೃತ ಎಂಬ ಕಲಿಕಾ ನ್ಯೂನತೆ ಮತ್ತು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶೈಕ್ಷಣಿಕ ಕಾರ್ಯಾಗಾರ ಮತ್ತು ಬ್ಯಾಗ್ ವಿತರಣೆಯ ಕಾರ್ಯಕ್ರಮವು ಜೆಸಿಐ ಆಲಂಕಾರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಹಾಗೂ ರೋಟರಿ ಶಿವಮೊಗ್ಗ ಪೂರ್ವ ಇವರ ಸಹಕಾರದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೋಕೇಶ್‌ ಎಸ್. ಆರ್‌ ರವರು ನೆರವೇರಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ “ವಿಶೇಷ ಚೇತನ ವಿದ್ಯಾರ್ಥಿಗಳು ತಮ್ಮ ತಮ್ಮ ನ್ಯೂನತೆಯ ಬಗ್ಗೆ ಹೆಚ್ಚು ಆಲೋಚನೆ ಮಾಡದೇ, ಸಾಧನೆಯಕಡೆಗೆ ಗಮನ ಹರಿಸಬೇಕು. ಇವತ್ತು ಒಬ್ಬ ಅಂಗವಿಕಲನು ಸತತ ಅಧ್ಯಯನ, ಪರಿಶ್ರಮದ ಮೂಲಕ ಸಮಾಜದಲ್ಲಿ ಉನ್ನತ ಹುದ್ದೆಗಳಾದ ಐಎಎಸ್ ಮತ್ತು ಇತ್ಯಾದಿ ಸೇವೆಯನ್ನು ಸಲ್ಲಿಸುವ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿ ಪೋಷಕರು, ಸಮಸ್ಯೆಯ ಬಗ್ಗೆ ಗಮನ ಕೊಡದೇ, ಇಂಥಹ ಮಕ್ಕಳನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಬೇಕು.” ಎಂಬ ಹಿತ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾದ ರೋಟರಿ ಶಿವಮೊಗ್ಗ ಪೂರ್ವ ಇದರ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಿ ಯವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ಜೆಸಿಐ ಮತ್ತು ರೋಟರಿ ಸ್ವಯಂ ಸೇವಾ ಸಂಘಟನೆಗಳು. ಎರಡರ ಉದ್ದೇಶವೂ ಒಂದಾರ್ಥದಲ್ಲಿ ಒಂದೇ ಆಗಿದೆ. ನಾವು ಕಲಿಕೆಯ ಕಂಪನ್ನು ಹರಡಿಸಲು ಶಿಕ್ಷಣ ಇಲಾಖೆ ಮತ್ತು ಇತರೆ ಇಲಾಖೆಗಳೊಂದಿಗೆ ಸೇರಿಕೊಂಡು ಯೋಜನೆಗಳನ್ನು ತಯಾರಿಸಿ ಅನುಷ್ಠಾನಕ್ಕೆ ತರುತ್ತೇವೆ. ಅದರ ಭಾಗವಾಗಿಯೇ ಇಂದು ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಾವು ಈ ಬ್ಯಾಗ್ ವಿತರಣೆಯ ಕಾರ್ಯವನ್ನು ಮಾಡುವುದರ ಮೂಲಕ ವಿಶೇಷ ಅಗತ್ಯತೆಯುಳ್ಳ ಮಕ್ಕಳ ಶಿಕ್ಷಣಕ್ಕೆ ಸಣ್ಣ ಮಟ್ಟಿನ ಸಹಾಯವನ್ನು ಮಾಡುತ್ತಿದ್ದೇವೆ.” ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿಯಾದ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಧರ್ಮಪಾಲ್‌ರಾವ್‌ ಕಜೆಯವರು ಮಾತನಾಡುತ್ತಾ, “ಇಂದು ನಾವು ವಿಶೇಷ ಅಗತ್ಯತೆಯುಳ್ಳ ಮಕ್ಕಳ ಆರೋಗ್ಯ, ಆರೈಕೆ, ಶಿಕ್ಷಣಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಈ ಕಾರ್ಯಗಾರದಲ್ಲಿ ತಿಳಿದುಕೊಂಡಿದ್ದೇವೆ. ನಾವು ಏನನ್ನೆಲ್ಲಾ ತಿಳಿದುಕೊಡಿದ್ದೇವೆಯೋ, ಅದನ್ನು ಅನುಷ್ಠಾನಕ್ಕೆ ತರಬೇಕು. ಆಗ ಇಂಥಹ ವಿಶೇಷ ಚೇತನರು ಇನ್ನಷ್ಟು ಸಾಧನೆಯನ್ನು ಮಾಡುತ್ತಾರೆ. ಭಗವಂತ ಎಲ್ಲರನ್ನೂ ಒಂದು ಅರ್ಥಪೂರ್ಣವಾದ ಕಾರ್ಯಗಳನ್ನು ನಿರ್ವಹಿಸಲೆಂದೇ ಈ ಭೂಮಿಗೆ ಕಳುಹಿಸಿಕೊಟ್ಟಿದ್ದಾನೆ. ಹಾಗಾಗಿ ಯಾರೂ ಕುಗ್ಗದೇ ಸಾಧಿಸಿ ಸಮಾಜಕ್ಕೆ ತೋರಿಸಿ” ಎಂಬ ಕರೆಯನ್ನುಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೆಸಿಐ ಆಲಂಕಾರಿನ ಅಧ್ಯಕ್ಷ ಜೆಸಿ ಅಜಿತ್‌ಕುಮಾರ್‌ರೈ ಯವರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ “ಸಮಾಜದಲ್ಲಿ ಪ್ರತಿಯೋರ್ವ ವ್ಯಕ್ತಿಯೂ ಸಮಾನವಾದ ಮಹತ್ವವನ್ನು ಪಡೆದಿರುತ್ತಾರೆ. ಆದರೆ ಅಂತರ ಎಲ್ಲಿ ಇದೆ ಅಂದರೆ, ನಮ್ಮ ಸಾಮರ್ಥ್ಯವನ್ನು ಹುಡುಕಿ, ನ್ಯೂನತೆಗಳನ್ನು ಮೆಟ್ಟಿ ನಿಲ್ಲುವುದರಲ್ಲಿದೆ. ಈ ರೀತಿ ಸಮಸ್ಯೆಗಳನ್ನು ಸರಿಸಿ, ಅವಕಾಶಗಳ ಸದ್ಬಳಕೆ ಮಾಡಿದಾಗ ಸಮಾಜದ ವಿಕಾಸವಾಗುತ್ತದೆ. ಇಂಥಹ ಮಹತ್ತರವಾದ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಜೆಸಿಐ. ಅದಲ್ಲದೆ ಇಂಥಹ ಕಾರ್ಯಕ್ರಮವನ್ನು ರೋಟರಿ ಮತ್ತು ವಿವಿಧ ಇಲಾಖೆಗಳ, ಸಂಘ- ಸಂಸ್ಥೆಗಳ ಅಪೂರ್ವ ಸಹಕಾರದಲ್ಲಿ ನಡೆಸಿ, ಇದರ ಫಲವನ್ನು ಮುಂಬರುವ ದಿನಗಳಲ್ಲಿ ಕಾಣುವಂತಾಗಲಿ ಎಂದು ಹೇಳಿದರು.

ಸಭಾಕಾರ್ಯಕ್ರಮಕ್ಕೆ ಮೊದಲು ಹಿರಿಯ ವೈದ್ಯರಾದ ಡಾ.ಗೋವಿಂದ ಪ್ರಸಾದ್‌ ಕಜೆಯವರು ಕಾರ್ಯಾಗಾರವನ್ನು ನಡೆಸಿ, ವಿಶೇಷ ಚೇತನ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳು ಸಾಂಕೇತಿಕವಾಗಿ ಬ್ಯಾಗ್ ವಿತರಿಸಿ, ನಂತರಲ್ಲಿ ಬ್ಯಾಗ್ ವಿತರಣೆಯನ್ನು ಮಾಡಲಾಯಿತು. ಕ್ಷೇತ್ರ ಸಮನ್ವಯ ಕೇಂದ್ರದ ಅಧಿಕಾರಿಗಳಾದ ಶ್ರೀಮತಿ ತನುಜಾ, ಶ್ರೀಮತಿ ಸೀತಮ್ಮ ಹಾಗು ಶ್ರೀ ಪ್ರಶಾಂತ್‌ರವರ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ವಿಶೇಷ ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಸೇರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ, ಬೆಂಗಳೂರು ಇದರ ಸಂಘಟನಾ ಕಾರ್ಯದರ್ಶಿಗಳಾದ ನಾಗನಗೌಡ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ, ದಕ್ಷಿಣಕನ್ನಡ ಇದರ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ, ಸರಕಾರಿ ನೌಕರರ ಸಂಘ ಇದರ ಅಧ್ಯಕ್ಷರಾದ ವಿಮಲ್‌ಕುಮಾರ್ ನೆಲ್ಯಾಡಿ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘ-ಕಡಬ ತಾಲೂಕು ಇದರ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ್, ಶಿವಮೊಗ್ಗ ರೋಟರಿಯ ಕಾರ್ಯದರ್ಶಿಗಳಾದ ಕುಮಾರಸ್ವಾಮಿ, ರೋಟರಿ ಪುತ್ತೂರಿನ ಅಧ್ಯಕ್ಷರಾದ ಉಮಾನಾಥ್, ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಆರ್.ಸಿ ಪುತ್ತೂರು ಇದರ ಸ್ಟೀಫನ್ ನವೀನ್ ವೇಗಸ್, ಶಿಕ್ಷಕರ ಸಂಘ ಪುತ್ತೂರುಇದರ ನವೀನ್‌ ರೈ, ಜೆಸಿಐ ಆಲಂಕಾರಿನ ಸ್ಥಾಪಕಾಧ್ಯಕ್ಷ ಬಿ ಎಲ್.ಜನಾರ್ದನ್, ಜೆಸಿಐ ಆಲಂಕಾರಿನ ಪೂರ್ವಾಧ್ಯಕ್ಷ ಪ್ರದೀಪ್‌ ರೈ ಮನವಳಿಕೆ ಇವರು ಶುಭ ಹಾರೈಸಿದರು.
ಜೆಸಿಐ ಆಲಂಕಾರಿನ ಜೆಸಿ ಅಜಿತ್‌ಕುಮಾರ ರೈಯವರು ಸ್ವಾಗತಿಸಿದರು. ಜೆಸಿಐ ಆಲಂಕಾರಿನ ಪೂರ್ವಾಧ್ಯಕ್ಷೆ ಜೆಸಿ ಹೇಮಲತಾ ಪ್ರದೀಪ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆಸಿಐ ಆಲಂಕಾರಿನ ಕಾರ್ಯದರ್ಶಿ ಚೇತನ್ ಎಂ ವಂದಿಸಿದರು. ದುರ್ಗಾಂಬಾ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಜೆಸಿಐ ಆಲಂಕಾರಿನ ಪೂರ್ವಾಧ್ಯಕ್ಷ ಜೆಸಿ ಪ್ರದೀಪ್ ಬಾಕಿಲ ಕಾರ್ಯಕ್ರಮ ನಿರ್ವಹಿಸಿದರು.

Leave a Reply

error: Content is protected !!