ಕಡಬ ತಾಲೂಕಿನಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಜ18:ಕೌಟುಂಬಿಕ ವ್ಯವಸ್ಥೆ ಶಿಥಿಲಾವಸ್ಥೆಗೆ ತಲುಪಿರುವ ಈ ಕಾಲ ಘಟ್ಟದಲ್ಲಿ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಶಿಸ್ತು, ಸಂಸ್ಕಾರದ ಬದುಕು ಕಲ್ಪಿಸಿ ಸದೃಢ ಸಮಾಜ ನಿರ್ಮಾಕ್ಕೆ ಕಾರಣರಾಗಿರುವ ಒಡಿಯೂರು ಶ್ರೀಗಳು, ಭಜನೆ ಸತ್ಸಂಗಗಳೊಂದಿಗೆ ಕೌಟುಂಬಿಕ ಪದ್ದತಿಯ ಮರುಸೃಷ್ಠಿ ಮಾಡಿದ್ದಾರೆ.
ಮನುಷ್ಯ ಜೀವನದಲ್ಲಿ ಮಾಡಿರುವ ಸಾಧನೆಯ ಮೇಲೆ ಅವರ ವಯಸ್ಸು ನಿರ್ಧಾರವಾಗುತ್ತದೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಅರವತ್ತು ತುಂಬುವುದರೊಳಗೆ ಅವರು ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಾಡಿರುವ ಉನ್ನತ ಸಾಧನೆ ಅವರ ವ್ಯಕ್ತಿತ್ವಕ್ಕೆ ಕೈ ಗನ್ನಡಿಯಾಗಿದೆ ಹಾಗೂ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದೇ ಹೋದರೆ ಅವರು ಭೌತಿವಾಗಿ ಮಾತ್ರ ಭಾರತೀಯರಾಗಿರುತ್ತಾರೆ. ಮಾನಸಿಕವಾಗಿ ವಿದೇಶಿ ಪರಂಪರೆಗೆ ಒಳಗಾಗುತ್ತಾರೆ. ಇದರಿಂದಾಗಿ ನಮಗೆಲ್ಲಾ ವೃದ್ಧಾಶ್ರಮ ಗ್ಯಾರಂಟಿ ಎಂದು ಹೇಳಿದ ಸುಬ್ರಹ್ಮಣ್ಯ ಶ್ರೀಗಳು, ಒಡಿಯೂರು ಶ್ರೀಗಳು ತನಗಾಗಿ ಬದುಕದೆ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ. ಲಕ್ಷಾಂತರ ಜನರಿಗೆ ಉಸಿರಾಗಿ ಸಮಾಜ ಕಟ್ಟುವ ಶ್ರೇಷ್ಠ ಕಾರ್ಯ ಮಾಡಿರುವ ಸಂತ ಎಂದು ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಅವರು ಸೋಮವಾರ ಕಡಬ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಒಡಿಯೂರು ಶ್ರೀಗಳ ಷಷ್ಠ್ಯಬ್ದ ಸಂಭ್ರಮ ಆಚರಣಾ ಸಮಿತಿಯ ವತಿಯಿಂದ ಶ್ರೀಗಳ ಜನ್ಮ ದಿನೋತ್ಸವವನ್ನು ಕಡಬ ವಲಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಿದ್ದರು.
ಗುರುವಂದನೆ ಸ್ವೀಕರಿಸಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಗುರು ವಂದನೆ ಎನ್ನುವುದು ನಮಗೆ ಅಲ್ಲ, ಅದು ಗುರು ಪರಂಪರೆಗೆ ಸಲ್ಲುವಂತಹದ್ದು. ನನ್ನ ವಯಸ್ಸು ಅದರಷ್ಟಕ್ಕೇ ಸಾಗುತ್ತಾ ಮುಂದೆ ಹೋಗಿದೆ. ಇಷ್ಟೊಂದು ಸುದೀರ್ಘ ಅವಧಿಯಲ್ಲಿ ನಾನು ಜನರ ಪ್ರೀತಿಯನ್ನು ಸಂಪಾದನೆ ಮಾಡಿದ್ದೇನೆ. ಅದು ನನ್ನ ಸನ್ಯಾಸ ಜೀವನದಲ್ಲಿ ಪಡೆದ ಅತಿ ದೊಡ್ಡ ಸಂಪತ್ತು ಎಂದರು.

ಕಡಬ ಶ್ರೀಕಂಠ ಸ್ವಾಮಿ ಮಹಾ ಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುತ್ತು ಕುಮಾರ್ ವೇದಿಕೆಯಲ್ಲಿ ಉಪಸ್ಥಿರಿದ್ದರು. ಈ ಸಂದರ್ಭದಲ್ಲಿ ಶ್ರೀಗಳ ಷಷ್ಠ್ಯಬ್ದ ಆಚರಣಾ ಸಮಿತಿ, ದುರ್ಗಾಬಿಕಾ ಭಜನಾ ಮಂಡಳಿ, ಒಡಿಯೂರು ಶ್ರೀಗಳ ಗ್ರಾಮ ವಿಕಾಸ ಯೋಜನೆಯ ವಿವಿಧ ಸಂಘಗಳ ವತಿಯಿಂದ ಗುರುವಂದನೆ ಮಾಡಿದರು. ಒಡಿಯೂರು ಗ್ರಾಮ ವಿಕಾಸ ಯೋಜನೆಯ ಉಪ್ಪಿನಂಗಡಿ ಹಾಗೂ ಪಂಜ ವಲಯದ ವಿಕಾಸ ವಾಹಿನಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಸ್ವಾಮೀಜಿ ಲಾಭಾಂಶ ವಿತರಿಸಿದರು.

ಒಡಿಯೂರು ಗುರದೇವ ಸೇವಾ ಬಳಗದ ಕಡಬ ವಲಯಾಧ್ಯಕ್ಷ ವಿಶ್ವನಾಥ ರೈ ಪೆರ್ಲ ಪ್ರಸ್ತಾವನೆಗೈದರು. ಶ್ರೀಗಳ ಷಷ್ಠ್ಯಬ್ದ ಆಚರಣ ಸಮಿತಿಯ ಕಡಬ ವಲಯಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಸ್ವಾಗತಿಸಿದರು. ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್. ಕೆ. ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!