ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅರಣ್ಯಾಧಿಕಾರಿಗೆ ಏಕವಚನದಲ್ಲಿ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ ಪ್ರಕರಣ; ಕರ್ನಾಟಕ ರಾಜ್ಯ ಅರಣ್ಯಾಧಿಕಾರಿಗಳ ಸಂಘ ಖಂಡನೆ

ಶೇರ್ ಮಾಡಿ

ಬೆಳ್ತಂಗಡಿಯ ಕಳೆಂಜ ಗ್ರಾಮದಲ್ಲಿ ವಲಯ ಅರಣ್ಯಾಧಿಕಾರಿ ಗಳ ವಿರುದ್ಧ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ದುರ್ವರ್ತನೆ, ಏಕವಚನದಲ್ಲಿ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ ಪ್ರಕರಣವನ್ನು ಕರ್ನಾಟಕ ಅರಣ್ಯಾಧಿಕಾರಿಗಳ ಸಂಘ ಖಂಡಿಸಿದೆ.

ಬೆಳ್ತಂಗಡಿ ತಾಲ್ಲೂಕಿನ, ಕಳೆಂಜ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿರುವುದನ್ನು ಒತ್ತುವರಿ ತೆರವುಗೊಳಿಸುವ ಸಮಯದಲ್ಲಿ ಬೆಳ್ತಂಗಡಿ ಶಾಸಕರು ಸಾರ್ವಜನಿಕವಾಗಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಯನ್ನು ಏಕವಚನದಲ್ಲಿ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿರುವುದು ಖಂಡನೀಯ, “ಆ” ಅವಾಚ್ಯ ಶಬ್ದದ ಬಗ್ಗೆ ಕನಿಷ್ಠ ಸೌಜನ್ಯಕ್ಕಾದರೂ ಕ್ಷಮೆ ವ್ಯಕ್ತಪಡಿಸದಿರುವುದು ಗೌರವಾನ್ವಿತ ಶಾಸಕರಿಗೆ ಶೋಭೆ ತರುವಂತಹುದಲ್ಲ, ಈ ಕೃತ್ಯವನ್ನು ಕರ್ನಾಟಕ ರಾಜ್ಯ ವಲಯ ಅರಣ್ಯಾಧಿಕಾರಿಯವರ ಸಂಘ(ರಿ)., ಬೆಂಗಳೂರು ಸಂಘವು ಕಠಿಣ ಪದಗಳಲ್ಲಿ ಖಂಡಿಸಿದೆ.

ಅಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ, ಜನಪ್ರತಿನಿಧಿಗಳಾಗಲೀ ಗೌರವಾನ್ವಿತ ಶಾಸಕರುಗಳಾಗಲೀ ಈ ನೆಲದ ಕಾನೂನನ್ನು ಪಾಲಿಸಬೇಕಾಗಿರುತ್ತದೆ. ಕಾನೂನಿಗಿಂತ ಯಾರೂ ಮಿಗಿಲಾಗಿರುವುದಿಲ್ಲ. ಒಂದು ವೇಳೆ ವಲಯ ಅರಣ್ಯಾಧಿಕಾರಿಗಳು ಏನೇ ಕರ್ತವ್ಯಚ್ಯುತಿ ಮಾಡಿದ್ದರೂ ಅದನ್ನು ಕಾನೂನಿನ ವ್ಯಾಪ್ತಿಯಲ್ಲೇ ಬಗೆಹರಿಸಿಕೊಳ್ಳಬೇಕಾಗಿರುವುದು ಶಾಸಕರಿಗೆ ತಿಳಿಯದೇ ಇರುವ ವಿಷಯವೇನಲ್ಲ. ಆಗಿದ್ದಾಗ್ಯೂ ಮಾನ್ಯ ಗೌರವಾನ್ವಿತ ಶಾಸಕರು ಸಾರ್ವಜನಿಕವಾಗಿ ವಲಯ ಅರಣ್ಯಾಧಿಕಾರಿಗೆ ತನ್ನ ಶಾಸನ ಬದ್ಧ ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕರ್ತವ್ಯಕ್ಕೆ ಅಡ್ಡಿ ಉಂಟು ಮಾಡಿ ಅವಾಚ್ಯವಾಗಿ ನಿಂಧಿಸಿರುವುದು ಅವರ ಘನತೆಗೆ ತಕ್ಕದ್ದಾಗಿರುವುದಿಲ್ಲ.

ಈ ಘಟನೆಯನ್ನು ಸಂಘವು ಖಂಡಿಸುತ್ತಾ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರಿಗೆ ಕಾನೂನಿನ ಅನ್ವಯ ಸಾರ್ವಜನಿಕ ಕೆಲಸ ನಿರ್ವಹಿಸಲು ನೈತಿಕ ಸ್ಥೈರ್ಯವನ್ನು ಸಂಘವು ನೀಡುತ್ತದೆ. ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಹೋರಾಟಕ್ಕೂ ಸಹ ಸಂಘವು ಸಿದ್ಧವಿರುತ್ತದೆ ಎಂದು ಈ ಮೂಲಕ ಸಂಘವು ಆಗ್ರಹಿಸುತ್ತದೆ ಎಂದು ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ವಲಯ ಅರಣ್ಯಾಧಿಕಾರಿಗಳ ಸಂಘ(ರಿ)ಬೆಂಗಳೂರು ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿದೆ.

Leave a Reply

error: Content is protected !!