
ನೆಲ್ಯಾಡಿ: ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಕಲಿತ ಶಿಕ್ಷಣವು ಜೀವನಕ್ಕೆ ಹತ್ತಿರವಾದ ಹಾಗೂ ಮುಖ್ಯವಾದ ಶಿಕ್ಷಣವಾಗಿದೆ. ಎನ್ಎಸ್ಎಸ್ ಸ್ವಯಂಸೇವಕರೇ ಪ್ರತಿ ವರ್ಷ ಕಾಲೇಜಿನ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಹಾಗೂ ಅತಿ ಹೆಚ್ಚು ಅಂಕ ಪಡೆದು ಮೊದಲಿನ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಕಾಲೇಜಿನ ಸಂಚಾಲಕರಾದ ರೆ.ಫಾ.ನೋಮಿಸ್ ಕುರಿಯಕೋಸ್ ಹೇಳಿದರು.

ನೆಲ್ಯಾಡಿ ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ ಫೆ.12ರಂದು ನಡೆದ ಎನ್ಎಸ್ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ರೆ.ಫಾ.ಅನೀಶ್ ಪಾರಶೆರಿಲ್ ಮಾತನಾಡಿ ಸಮಾಜ ಸೇವೆ, ಸಂಘಟನೆ, ವ್ಯಕ್ತಿತ್ವ ವಿಕಸನ ಹೊಂದಲು ಹಾಗೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವನ ನಡೆಸಲು ರಾಷ್ಟ್ರೀಯ ಸೇವಾ ಯೋಜನೆಯು ಸಹಕಾರಿಯಾಗಿದೆ ಎಂದರು. ಕಾಲೇಜಿನ ಪ್ರಾಚಾರ್ಯರಾದ ಏಲಿಯಾಸ್ ಎಂ.ಕೆ. ಸಂದರ್ಭೋಚಿತವಾಗಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ವಿಶ್ವನಾಥ ಶೆಟ್ಟಿ.ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಒಂದು ವರ್ಷ ಕಾಲ ನಡೆದ ಕಾರ್ಯಕ್ರಮಗಳ ವಿವರವನ್ನು ನೀಡಿ ಸ್ವಾಗತಿಸಿದರು. ಸ್ವಯಂಸೇವಕ ವಿದ್ಯಾರ್ಥಿಗಳಾದ ಗೋಪಿಕಾ, ದೀಕ್ಷಿತ, ಆಶ್ಲೇಷ, ದೀಕ್ಷಾ ಅನಿಸಿಕೆ ವ್ಯಕ್ತಪಡಿಸಿದರು. ಸ್ಪಂದನ ನಿರೂಪಿಸಿದರು. ದೀಪಕ್ ವಂದಿಸಿದರು.






