

ಸುಬ್ರಹ್ಮಣ್ಯ: ಜನ್ಮಾಂತರದ ಕರ್ಮಾನುಸಾರವಾಗಿ ಮನುಷ್ಯ, ಜೀವನದಲ್ಲಿ ಕಷ್ಟ ಸುಖಗಳನ್ನು ಅನುಭವಿಸುತ್ತಾನೆ. ಯಾವತ್ತೂ ಸುಖ ಬೇಕೆಂಬುದು ಮನುಷ್ಯನ ಆಶಯ. ಆದರೆ ಅದು ಅಸಾಧ್ಯ. ಕನಿಷ್ಠ ದುಃಖದ ತೀವ್ರತೆ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಪ್ರಯತ್ನಿಸಬೇಕು. ಮುಂದೆ ಬರಬಹುದಾದ ಅನಿಷ್ಟಗಳನ್ನು ಮೊದಲೇ ತಿಳಿದುಕೊಳ್ಳಲು ಗ್ರಹಗಳ ಸ್ಥಿತಿ ಸಹಕಾರ ನೀಡುತ್ತದೆ. ನವಗ್ರಹಾಂತರ್ಗತ ನೃಸಿಂಹನ ಆರಾಧನೆಯಿಂದ ದುರಿತದ ತೀವ್ರತೆ ಕಡಿಮೆ ಆಗುತ್ತದೆ ಎಂದು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಸ್ವಾಮಿ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ರಾಮಕುಂಜ ಸಮೀಪದ ಹಳೆನೇರೆಂಕಿ ಕಟ್ಟಪುಣಿ ನಿವಾಸಿ ಧಾರ್ಮಿಕ ಮಾರ್ಗದರ್ಶಕ, ವಿದ್ವಾಂಸ ಕೆ.ಕೃಷ್ಣಪ್ರಸಾದ ನೂರಿತ್ತಾಯರು ರಚಿಸಿರುವ “ನವಗ್ರಹಾರಾಧನಾ ವಿಧಿ” ಎಂಬ ಕೃತಿಯನ್ನು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಬಿಡುಗಡೆಗೊಳಿಸುತ್ತಾ ಆಶೀರ್ವಚನ ನೀಡಿದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಲೇಖಕ ಟಿ.ನಾರಾಯಣ ಭಟ್ ರಾಮಕುಂಜ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹಬ್ಬ ಹರಿದಿನಗಳು, ಪೂಜೆ ಪುನಸ್ಕಾರಗಳು ಬದುಕಿಗೆ ಶಾಂತಿ ನೆಮ್ಮದಿ ನೀಡುತ್ತವೆ. ನಮ್ಮ ಹಿರಿಯರು ದಾರೆಯೆರೆದ ಸಂಸ್ಕೃತಿ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಅರಿತು ಆಚರಿಸಿ,ಕೃತಿಗಳ ಮೂಲಕ ದಾಟಿಸುವ ಜವಾಬ್ದಾರಿಯುತ ಕಾರ್ಯವನ್ನು ಲೇಖಕರು ಮಾಡಿರುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಅರ್ಚಕರಾದ ರಾಮಕೃಷ್ಣ ಆಸ್ರಣ್ಣ ಮಧುಸೂದನ ಕಲ್ಲೂರಾಯ, ರಮೇಶ ಆಸ್ರಣ್ಣ, ವಿದ್ವಾಂಸ ಸೂರ್ಯಪ್ರಕಾಶ ಉಡುಪ ಆಲಂಕಾರು, ಸುಬ್ರಹ್ಮಣ್ಯ ಮಠದ ಶಿವಕುಮಾರ್, ಸುದರ್ಶನ ಕೆದಿಲಾಯ, ಶ್ರೀಧರ ಬಲ್ಲಾಳ್,ಮಿಥುನ್ ಆಚಾರ್ಯ, ಕುಮಾರಿ ಕೃತಿ ಉಪಸ್ಥಿತರಿದ್ದರು.





