

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಪ್ರಮುಖ ಆರೋಪಿಗಳನ್ನು ಬಜಪೆ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಳವಾರು ನಿವಾಸಿ ಅಜರುದ್ದೀನ್ ಅಲಿಯಾಸ್ ಅಜ್ಜು (29), ಬಜಪೆ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ (24), ಹಾಗೂ ವಾಮಂಜೂರು ನಿವಾಸಿ ನೌಷದ್ ಅಲಿಯಾಸ್ ಚೊಟ್ಟೆ ನೌಷದ್ (39) ಎಂದು ಗುರುತಿಸಲಾಗಿದೆ.
ಆರೋಪಿ ಅಜರುದ್ದೀನ್ ವಿರುದ್ಧ ಪಣಂಬೂರು, ಸುರತ್ಕಲ್ ಹಾಗೂ ಮುಲ್ಕಿ ಠಾಣೆಗಳಲ್ಲಿ ಈಗಾಗಲೇ ಮೂರು ಕಳವು ಪ್ರಕರಣಗಳು ದಾಖಲಾಗಿದ್ದರೆ, ಅಬ್ದುಲ್ ಖಾದರ್ ಕೊಲೆ ಬಳಿಕ ಪರಾರಿಗೆ ಬಳಸಿದ ಕಾರು ವ್ಯವಸ್ಥೆ ಮಾಡಿದ್ದ ಎಂದು ತಿಳಿದು ಬಂದಿದೆ. ನೌಷದ್ ಈ ಹಿಂದೆ ಆರು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಕೊಲೆ ಸಂಚಿನಲ್ಲಿ ನೇರವಾಗಿ ತೊಡಗಿದ್ದನೆಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಬಂಧನದೊಂದಿಗೆ ಬಂಧಿತರ ಸಂಖ್ಯೆ 11ಕ್ಕೆ ಏರಿದೆ. ಮೇ 1ರಂದು ಬಜಪೆಯ ಕಿನ್ನಿಪದವು ಬಳಿ ರಾತ್ರಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ತನಿಖೆ ಇನ್ನಷ್ಟು ಗಂಭೀರವಾಗಿ ಮುಂದುವರೆದಿದೆ.













