ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಪುನಶ್ಚೇತನ ಕಾರ್ಯಗಾರ

ಶೇರ್ ಮಾಡಿ

ನೆಲ್ಯಾಡಿ: ಗ್ರಾಮೀಣ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಶಕ್ತಿಯನ್ನು ತುಂಬುವ ಉದ್ದೇಶದಿಂದ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಏರ್ಪಡಿಸಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಶುಕ್ರವಾರದಂದು ಹಮ್ಮಿಕೊಂಡ ಪುನಶ್ಚೇತನ ಕಾರ್ಯಗಾರ ಯಶಸ್ವಿಯಾಗಿ ನೆರವೇರಿತು.

ಈ ಕಾರ್ಯಗಾರವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಜನಾರ್ದನ ತೋಳ್ಪಡಿತ್ತಾಯ ಅವರು ನಡೆಸಿಕೊಟ್ಟರು. ಅವರು ತಮ್ಮ ಉದ್ಬೋಧನಾತ್ಮಕ ಭಾಷಣದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಿನ್ನಡೆಯಾಗುತ್ತಿರುವ ವಿವಿಧ ಕಾರಣಗಳನ್ನು ದಿಟ್ಟವಾಗಿ ಹೊರಹಾಕಿದರು. “ಶಾಲೆಯ ಸಾಂಸ್ಥಿಕ ಮೌಲ್ಯಗಳು, ಅದರ ಪಠ್ಯೇತರ ಚಟುವಟಿಕೆಗಳು, ಮಕ್ಕಳಲ್ಲಿ ಬಿತ್ತಲಾಗುವ ಸಂಸ್ಕಾರ ಮತ್ತು ಸೌಜನ್ಯ—ಇವು ಎಲ್ಲಾ ಫಲಿತಾಂಶಗಳೊಳಗೆ ಮೆರೆಯಬೇಕು, ಇಂದಿನ ಪಠ್ಯಕ್ರಮ ಶುದ್ಧವಾಗಿ ಪರೀಕ್ಷಾ ಮೌಲ್ಯಾಧಾರಿತವಾಗುತ್ತಿದೆ. ಆದರೆ ಮಕ್ಕಳಿಗೆ ಬೋಧಿಸಬೇಕಾದುದು ಕೇವಲ ಪುಸ್ತಕದ ಜ್ಞಾನವಲ್ಲ. ಜೀವನವನ್ನು ಎದುರಿಸುವ ಧೈರ್ಯ, ಶಿಸ್ತು, ನೈತಿಕ ಮೌಲ್ಯಗಳು, ಸಮಾಜಮುಖಿ ನಡತೆ, ಸರಳತೆ, ಸಂಸ್ಕೃತಿ ಇವುಗಳೂ ಬಹುಮುಖ್ಯ ಇತ್ತೀಚೆಗೆ ಶಾಲಾ ಶಿಕ್ಷಕರ ಮೇಲಿನ ಒತ್ತಡಗಳು ಹೆಚ್ಚಾಗಿರುವುದು, ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಕುಗ್ಗುತ್ತಿರುವುದು ಹಾಗೂ ಪೋಷಕರು ತಮ್ಮ ಮಕ್ಕಳ ಪ್ರತಿಯೊಂದು ಅಂಶವನ್ನು ಬರೀ ಅಂಕಗಳ ತೂಕದಿಂದಲೇ ಅಳೆಯುತ್ತಿರುವುದು—ಇವು ಶಾಲಾ ವ್ಯವಸ್ಥೆಗೆ ದೊಡ್ಡ ಸವಾಲಾಗಿವೆ ಎಂಬ ವಿಷಯವನ್ನೂ ಅವರು ಸ್ಪಷ್ಟಪಡಿಸಿದರು.

“ಇಂದು ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆದರಿಕೆಯ ಶೈಲಿಯಲ್ಲಿ ಪಾಠ ಮಾಡಬೇಕಾದ ಕಾಲ ಬಂದಿದೆ. ಆದರೆ ಶಿಕ್ಷಣ ಪ್ರಕ್ರಿಯೆ ಒತ್ತಡದಿಂದಲ್ಲ, ಪ್ರೇರಣೆಯಿಂದ ಸಾಗಬೇಕು. ಪೋಷಕರು ತಮ್ಮ ಮಕ್ಕಳು ಉತ್ತಮರಾಗಲೆಂದು ಎಷ್ಟೋ ಬಲಿದಾನ ಮಾಡುತ್ತಿದ್ದಾರೆ. ಆದರೆ ಈ ತ್ಯಾಗಗಳು ಫಲ ನೀಡಬೇಕೆಂದರೆ ಮಕ್ಕಳು ಸಹ ಸ್ವಯಂ ಪ್ರೇರಣೆಯಿಂದ ಓದಬೇಕು,” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಡಾ. ವರ್ಗೀಸ್ ಕೈಪನಡ್ಕ ಅವರು ಪೋಷಕರ ಜವಾಬ್ದಾರಿಯನ್ನೂ ನೆನೆಸಿದರು. “ಮಕ್ಕಳಿಗೆ ಶ್ರೇಷ್ಠ ಶಿಕ್ಷಣ ನೀಡುವುದು ಶಾಲೆಯ ಕಾರ್ಯ. ಆದರೆ ಮನೆಯಲ್ಲಿಯೂ ಪೋಷಕರು ಸಮಯ ಕೊಡಬೇಕು, ಮಾನಸಿಕ ಸಹಕಾರ ನೀಡಬೇಕು. ನಿರಂತರವಾಗಿ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು. ಶಿಕ್ಷಣ ಪೋಷಕ-ಶಾಲೆ-ವಿದ್ಯಾರ್ಥಿ ಎಂಬ ಮೂರು ಮೂಲಸ್ತಂಭಗಳ ಒಟ್ಟಿಗೆ ಸಾಗಿದಾಗಲೇ ಫಲಕಾರಿತ್ವ ಸಾಧ್ಯ,” ಎಂದರು.

ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಕಾರ್ಯಕ್ರಮದ ಅಂತ್ಯದಲ್ಲಿ ವಿದ್ಯಾರ್ಥಿಗಳ ಶಂಕೆ ನಿವಾರಣೆ, ಪೋಷಕರಿಗೆ ಮಾರ್ಗದರ್ಶನ, ಪರೀಕ್ಷಾ ತಯಾರಿ ತಂತ್ರಗಳು, ಸಮಯ ನಿರ್ವಹಣೆ, ಆರೋಗ್ಯ ಸಂರಕ್ಷಣೆ ಮುಂತಾದ ಹಲವು ಹಿತವಚನಗಳು ಹಂಚಲಾಯಿತು. ಮುಖ್ಯ ಶಿಕ್ಷಕ ಜಾರ್ಜ್.ಕೆ ತೋಮಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಪೋಷಕರ ಪ್ರತಿನಿಧಿ ಸನ್ನಿ ವಂದಿಸಿದರು.

  •  

Leave a Reply

error: Content is protected !!