

ಕೊಕ್ಕಡ: ಮುಂಗಾರು ಮಳೆಯ ಹಿನ್ನಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿಕ ವಿಪತ್ತುಗಳನ್ನು ತಡೆಗಟ್ಟಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಧೀನದಲ್ಲಿ ಗುಡ್ಡಜರಿತ ಅಥವಾ ಹೊಳೆ/ತೊರೆಗಳ ತೀರದ ಅಪಾಯಕಾರಿ ಪ್ರದೇಶಗಳಲ್ಲಿ ಮನೆ ಹೊಂದಿರುವವರಿಗೆ ಗ್ರಾಮ ಪಂಚಾಯತಿ ಸಿಬ್ಬಂದಿ ನೋಟೀಸು ನೀಡಲು ಪ್ರಾರಂಭಿಸಿದ್ದಾರೆ.
ಕೊಕ್ಕಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಮುಂಡೂರುಪಳಿಕೆ ಬಳಿ ಹೊಳೆಬದಿಯಲ್ಲಿ ವಾಸಿಸುತ್ತಿರುವ ಪ್ರಶಾಂತ್ ಎಚ್, ಅಣ್ಣು ಗೌಡ, ಶಿವಾನಂದ, ದುಗ್ಗಮ್ಮ, ಚನ್ನಕ್ಕ, ಬಲ್ತ್ಯಡ್ಕ ಮನೆ ಎಲ್ಯಕ್ಕ ಅವರಿಗೆ ಮಾಹಿತಿ ನೀಡಲಾಗಿದ್ದು ಹಾಗೂ ಹಾರಮನೆ ಟಿ.ಜೆ. ರೀನಾ ಕುಟುಂಬಗಳಿಗೆ ನೋಟೀಸು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಮಳೆ ಸುರಿದಲ್ಲಿ ತಕ್ಷಣ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಇವರ ಮನೆಗಳಿಗೆ ತೆರಳಿ ನೋಟೀಸು ಹಸ್ತಾಂತರಿಸಿದ್ದು, ಅಧಿಕ ಮಳೆಯಾದ ಸಂದರ್ಭದಲ್ಲಿ ವಿಪತ್ತು ಸಂಭವಿಸುವ ಸಾಧ್ಯತೆಯುಂಟಾದರೆ ಕೂಡಲೇ ಕಾಳಜಿ ಕೇಂದ್ರಗಳಿಗೆ ಅಥವಾ ಸಂಬಂಧಿಕರ ಮನೆಗಳಿಗೆ ತೆರಳಿ ಸುರಕ್ಷಿತವಾಗಿ ತಂಗುವಂತೆ ಸೂಚಿಸಲಾಗಿದೆ.










