


ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಪ್ರದೇಶದಲ್ಲಿ ಪರಿಸರಕ್ಕೆ ಅಪಾಯಕಾರಿಯಾದ ಘಟನೆ ಬೆಳಕಿಗೆ ಬಂದಿದೆ. ಸೋಮವಾರದಂದು ರಸ್ತೆ ಬದಿಯ ತೋಡಿಗೆ ಯಾರೋ ಕಿಡಿಗೇಡಿಗಳು ರಾಸಾಯನಿಕ ಮಿಶ್ರಿತ ಸಿಮೆಂಟ್ನ ಕಾಂಕ್ರೀಟ್ ಸುರಿದು ಹೋದ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಘಟನೆಯಿಂದ ತೋಡಿನ ನೀರು ಸಂಪೂರ್ಣವಾಗಿ ರಾಸಾಯನಿಕ ಮಿಶ್ರಣಗೊಂಡಿದ್ದು, ನೀರಿನಲ್ಲಿದ್ದ ಅನೇಕ ಮೀನುಗಳು ಸತ್ತು ಮೇಲಕ್ಕೆ ತೇಲುತ್ತಿರುವುದು ಕಂಡುಬಂದಿದೆ. ತೋಡಿ ನೀರು ವಿಷಮಯವಾಗಿರುವುದರಿಂದ ಸುತ್ತಮುತ್ತಲಿನ ನಿವಾಸಿಗಳು ಮತ್ತು ಕೃಷಿಕರು ಭಯಭೀತರಾಗಿದ್ದಾರೆ.
ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪದ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ವೇಳೆ ವಾಹನದಲ್ಲಿ ಉಳಿದ ರಾಸಾಯನಿಕ ಮಿಶ್ರಿತ ಕಾಂಕ್ರೀಟ್ ಅನ್ನು ಕೆಲವರು ನಿರ್ಲಕ್ಷ್ಯವಾಗಿ ನೀರಿನ ತೋಡಿಗೆ ಸುರಿದಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಘಟನೆಯಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಸ್ಥಳೀಯರು ಸಂಬಂಧಪಟ್ಟ ಇಲಾಖೆಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ, ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.






