ಕಡಬ: ಕನ್ನಡ ರಾಜ್ಯೋತ್ಸವದ ಪೂರ್ವಭಾವಿ ಸಭೆ

ಶೇರ್ ಮಾಡಿ

ಕಡಬ: ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ಭವ್ಯ ಆಚರಣೆಗೆ ಸಿದ್ಧತೆಗಾಗಿ ಕಡಬ ತಾಲೂಕು ಕಚೇರಿಯ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಅ.16ರಂದು ಜರುಗಿತು.

ಸಭೆಯನ್ನು ತಾಲೂಕು ತಹಶಿಲ್ದಾರ್ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷ ಪ್ರಭಾಕರ ಖಜೂರೆ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ರಾಜ್ಯೋತ್ಸವದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆಗಳು, ವ್ಯವಸ್ಥೆಗಳು ಹಾಗೂ ಕಾರ್ಯಕ್ರಮಗಳ ವಿನ್ಯಾಸದ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.

ಧ್ವಜಾರೋಹಣ, ಮೆರವಣಿಗೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಗೌರವಸೂಚಕ ಅಭಿನಂದನಾ ಸಮಾರಂಭಗಳ ಕುರಿತಾದ ರೂಪುರೇಷೆಗಳನ್ನು ಸಭೆಯಲ್ಲಿ ತಯಾರಿಸಲಾಯಿತು. ತಾಲ್ಲೂಕಿನ ಎಲ್ಲಾ ಶಾಲೆಗಳು, ಕಾಲೇಜುಗಳು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ರಾಜ್ಯೋತ್ಸವವನ್ನು ಸಮಗ್ರತೆಯಿಂದ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ, ಉಪತಹಶಿಲ್ದಾರರು ಗೋಪಾಲ್, ಸಯ್ಯದ್ದುಲ್ಲಾ ಖಾನ್ ಹಾಗೂ ವೆಂಕಟೇಶ್, ಕಂದಾಯ ನಿರೀಕ್ಷಕ ಪ್ರಥ್ವಿರಾಜ್, ರಾಜಕೀಯ ಮುಖಂಡರು ಪಿ.ಪಿ ವರ್ಗೀಸ್, ಸಯ್ಯದ್ ಮೀರಾ ಸಾಹೇಬ್, ಅಭಿಲಾಷ್ ಪಿ.ಕೆ, ನೀಲಾವತಿ ಶಿವರಾಮ್, ಹನೀಫ್ ಹಾಗೂ ಅಶ್ರಫ್ ಶೇಡಿಗುಂಡಿ ಅವರು ಉಪಸ್ಥಿತರಿದ್ದರು.

ಸಂಘ-ಸಂಸ್ಥೆಗಳು, ಧಾರ್ಮಿಕ, ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳೂ ಸಭೆಯಲ್ಲಿ ಭಾಗವಹಿಸಿ ಸಲಹೆ-ಸೂಚನೆಗಳನ್ನು ನೀಡಿದರು. ಉಪತಹಶಿಲ್ದಾರ್ ಗೋಪಾಲ್ ವಂದಿಸಿದರು.

  •  

Leave a Reply

error: Content is protected !!