


ಬೆಳ್ತಂಗಡಿ: ದೀಪಾವಳಿಯ ಸಂಭ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕು ಬಸ್ ನಿಲ್ದಾಣದ ಬಳಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಹೊಳೆಯಿಸುವ 6ನೇ ವರ್ಷದ ದೋಸೆಹಬ್ಬ ಹಾಗೂ ಗೋ ಪೂಜಾ ಉತ್ಸವ ನಾಳೆ (ಅ.20) ಸೋಮವಾರದಂದು ವಿಜೃಂಭಣೆಯಿಂದ ನಡೆಯಲಿದೆ. ಶಾಸಕರಾದ ಹರೀಶ್ ಪೂಂಜರವರ ಸಾರಥ್ಯದಲ್ಲಿ ಈ ಬೃಹತ್ ಉತ್ಸವವನ್ನು ಬಿಜೆಪಿ ಯುವ ಮೋರ್ಚಾ ಆಯೋಜಿಸಿದೆ ಎಂದು ಅಧ್ಯಕ್ಷ ಶಶಿರಾಜ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದೀಜಿಯವರ 75ನೇ ಜನ್ಮದಿನ ಹಾಗೂ ಅವರು ಭಾರತದ ಆಡಳಿತ ಚುಕ್ಕಾಣಿ ಹಿಡಿದು 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸ್ಮರಣಾರ್ಥವಾಗಿ ಬೆಳಿಗ್ಗೆ 8.00 ಗಂಟೆಗೆ ನಮೋ ಮ್ಯಾರಥಾನ್ ಓಟ ವಾಣಿ ಶಿಕ್ಷಣ ಸಂಸ್ಥೆಗಳ ಬಳಿಯಿಂದ ಆರಂಭವಾಗಿ ಬಸ್ ನಿಲ್ದಾಣದವರೆಗೆ ನಡೆಯಲಿದೆ.
ಬಳಿಕ ಶಾಸಕರಾದ ಹರೀಶ್ ಪೂಂಜ ಅವರು ತಾಲೂಕಿನ ಮನೆ ಹಬ್ಬವಾದ ದೋಸೆಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಮಟ್ಟದ ಸಾಂಸ್ಕೃತಿಕ ತುಡರ್ ನೃತ್ಯ ಸ್ಪರ್ಧೆ, ಮಕ್ಕಳ ಹುಲಿವೇಷ ಸ್ಪರ್ಧೆ (ಬಾಲೆ ಪಿಲಿ) ದಿನಪೂರ್ತಿ ನಡೆಯಲಿದ್ದು, ಸಂಜೆ 6ರ ವೇಳೆಗೆ ಗೋ ಪೂಜಾ ಉತ್ಸವ, ದೀಪ ಪ್ರಜ್ವಲನೆ, ಭಜರಂಗ ಬಲಿ ನಾಟಕ ಪ್ರದರ್ಶನ ಹಾಗೂ ರೀಲ್ಸ್ ಸ್ಪರ್ಧೆ ನಡೆಯಲಿದೆ.
ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು, ಸಂಸದರು, ಶಾಸಕರು ಹಾಗೂ ಅನೇಕ ಗಣ್ಯರು ಈ ಸಾಂಸ್ಕೃತಿಕ ಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಜನತೆ ದೋಸೆ ಸವಿದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೋರಿದ್ದಾರೆ.






