


ಬೆಳ್ತಂಗಡಿ: ಚಿಕ್ಕಮಗಳೂರಿನ ತರೀಕೆರೆಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾದ 14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಬಂದಾರು ಸ.ಹಿ.ಉ.ಪ್ರಾ.ಶಾಲೆಯ ಕುಮಾರಿ ರಕ್ಷಿತಾ ಜೆ ಕ್ರೀಡಾ ಪಟುವಾಗಿ ಗುರುತಿಸಿಕೊಂಡಿದ್ದಾರೆ.
ತೀಕ್ಷ್ಣ ಆಟದ ನೈಪುಣ್ಯದಿಂದ ತಂಡವನ್ನು ಗೆಲುವಿನ ದಾರಿಯತ್ತ ಮುನ್ನಡೆಸಿದ ರಕ್ಷಿತಾ ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಪಡೆದು, ಬರುವ 70ನೇ ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಗೊಂಡಿದ್ದಾಳೆ. ಈ ಪಂದ್ಯಾಟವು ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದ ಕಡಪಾದಲ್ಲಿ ನಡೆಯಲಿದೆ.
ರಕ್ಷಿತಾ ಅವರು ಮೊಗ್ರು ಗ್ರಾಮ ದಂಡುಗ ನಿವಾಸಿ ಶ್ರೀಮತಿ ಶೀಲಾವತಿ–ಜನಾರ್ಧನ ದಂಪತಿಗಳ ಸುಪುತ್ರಿ. ಕ್ರೀಡಾ ಕ್ಷೇತ್ರದಲ್ಲಿ ತೋರಿದ ಅದ್ಭುತ ಪ್ರತಿಭೆಗೆ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಹಾಗೂ ವಿದ್ಯಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.






