

ನೆಲ್ಯಾಡಿ: ಕಡಬ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಶ್ರಮದಾನ
ಕೌಕ್ರಾಡಿ ಗ್ರಾಮದ ಪುತ್ಯೆ ಎಂಬಲ್ಲಿ ವಾಸಿಸುವ ಜಾನಕಿ ಎಂಬ ಮಹಿಳೆ, ಪತಿಯ ಅನಾರೋಗ್ಯದಿಂದ ಮೃತರಾಗಿದ್ದು, ನಂತರ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕವಾಗಿ ತುಂಬಾ ಕಷ್ಟದಲ್ಲಿರುವ ಅವರು ಹೊಸ ಮನೆ ನಿರ್ಮಾಣಕ್ಕೆ ಕೈಹಾಕಿದ್ದು, ಹಳೆ ಮನೆಯ ಶೀಟು ಮತ್ತು ಗೋಡೆಯ ಇಟ್ಟಿಗೆಗಳನ್ನು ತೆರವುಗೊಳಿಸಲು ಸಹಾಯ ಕೋರಿದ್ದರು. ಇವರ ಬೇಡಿಕೆಗೆ ತಕ್ಷಣ ಸ್ಪಂದಿಸಿದ ನೆಲ್ಯಾಡಿ ವಲಯದ ಶೌರ್ಯ ಸ್ವಯಂಸೇವಕರು ಸ್ಥಳಕ್ಕೆ ಭೇಟಿ ನೀಡಿ, ಹಳೆ ಮನೆಯನ್ನು ತೆರವುಗೊಳಿಸುವ ಶ್ರಮದಾನದಲ್ಲಿ ತೊಡಗಿ ಬೆಂಬಲ ನೀಡಿದರು.
ಶ್ರಮದಾನ ಕಾರ್ಯದ ನಂತರ ನಡೆದ ಮಾಸಿಕ ಸಭೆಯನ್ನು ವಲಯ ಪ್ರತಿನಿಧಿ ರಮೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಸಭೆಯಲ್ಲಿ ವಲಯ ಮೇಲ್ವಿಚಾರಕ ಆನಂದ ಡಿ.ಬಿ., ಘಟಕ ಸಂಯೋಜಕಿ ನಮಿತಾ ಎಸ್. ಶೆಟ್ಟಿ, ಕೌಕ್ರಾಡಿ ಸೇವಾ ಪ್ರತಿನಿಧಿ ಸುಮನಾ ಎಸ್. ಜೊತೆಗೆ ಸ್ವಯಂಸೇವಕರಾದ ಬಾಲಕೃಷ್ಣ ಗೌಡ, ಕುರಿಯಕೋಸ್ ಟಿ.ಎಂ., ಸಂತೋಷ್ ಕುಮಾರ್, ಚಂದ್ರ ಕೆ.ಎನ್., ಜೋಬಿ ಮತ್ತಾಯಿ, ಗೀತಾ, ರಮೇಶ್ ಬಿ., ಜಯಂತಿ ಮತ್ತು ಹೇಮಾ ವಿ. ಭಾಗವಹಿಸಿದ್ದರು.






