

ನೆಲ್ಯಾಡಿ: ನೆಲ್ಯಾಡಿಯ ಪವಿತ್ರ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಶನಿವಾರ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ 26ವರ್ಷಗಳ ಸುದೀರ್ಘ ಅವಧಿಯಲ್ಲಿ ಅಪಾರ ಸೇವೆ ಸಲ್ಲಿಸಿ ನಿವೃತ್ತರಾದ ಪರಮಪೂಜ್ಯ ಅತಿವಂದನಿಯ ಮಾರ್ ಲಾರೆನ್ಸ್ ಮುಕ್ಕುಯಿ ಅವರಿಗೆ ಗೌರವದ ಬೀಳ್ಕೊಡುಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಸರ್ವ ಸದಸ್ಯರು, ನಾಡಿನ ಗಣ್ಯರು ಮತ್ತು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ, ಶ್ರೀಗಳ ವಿಶ್ರಾಂತ ಜೀವನಕ್ಕೆ ಶುಭಕೋರಿದರು. ಕರಾವಳಿ ಪ್ರದೇಶದಲ್ಲಿ ಸೌಹಾರ್ದತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಲಾರೆನ್ಸ್ ಮುಕ್ಕುಯಿ ನೀಡಿದ ಅನನ್ಯ ಕೊಡುಗೆಯನ್ನು ಗಣ್ಯರು ಸ್ಮರಿಸಿ ಕೃತಜ್ಞತೆ ಸೂಚಿಸಿದರು.
ಕಾರ್ಯಕ್ರಮಕ್ಕೆ ನೂತನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಜೇಮ್ಸ್ ಪಟ್ಟೆರಿಲ್ ನೇತೃತ್ವ ವಹಿಸಿದ್ದರು. ಚರ್ಚ್ನ ಧರ್ಮಗುರುಗಳಾದ ಫಾ.ಶಾಜಿ ಮಾತ್ಯು, ಫಾ.ಅಲೆಕ್ಸ್, ರೀಜಿಯನಲ್ ಸುಪಿರಿಯರ್ ಸಿಸ್ಟರ್ ಲಿಸ್ ಮಾತ್ಯು ಎಸ್.ಎಚ್., ಟ್ರಸ್ಟಿಗಳಾದ ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕಿನಾಟ್ಟು, ರೆಜಿ ಕೊಳಂಗರಾತ್, ಜೋಯ್ ಪುತ್ತೆನ್ಪರಂಭಿಲ್ ಹಾಗೂ ಸಂಯೋಜಕರಾದ ಜೋರ್ಜಿ ಕುಟ್ಟಿ ಆಯಾಮ್ ಕುಡಿ ಮೊದಲಾದವರು ಕಾರ್ಯಕ್ರಮದ ನೇತೃತ್ವವಹಿಸಿದ್ದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶ್ರೀಗಳಿಗೆ ಗೌರವ ಕಾಣಿಕೆಗಳನ್ನು ಸಮರ್ಪಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.






