

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಇತ್ತೀಚೆಗೆ ಅಭಿಷೇಕಗೊಂಡಿರುವ ಬಿಷಪ್ ಜೇಮ್ಸ್ ಪಟೇರಿಲ್ ಅವರು ನ.23ರಂದು ನೆಟ್ಟಣ ಸೈಂಟ್ ಮೇರಿಸ್ ಚರ್ಚ್ಗೆ ಆತ್ಮೀಯ ಭೇಟಿಯನ್ನು ನೀಡಿದರು.
1990-91ರಲ್ಲಿ ನೆಟ್ಟಣ–ಗುತ್ತಿಗಾರು ಚರ್ಚ್ನಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ಸಂದರ್ಭದಲ್ಲಿ ನೆಟ್ಟಣ ಪ್ರದೇಶದೊಂದಿಗೆ ಗಾಢವಾದ ಭಾವನಾತ್ಮಕ ಬಾಂಧವ್ಯ ಬೆಳೆಸಿಕೊಂಡಿದ್ದ ಬಿಷಪರಿಗೆ, ಧರ್ಮಾಧ್ಯಕ್ಷರಾದ ಬಳಿಕದ ಇದು ಮೊದಲ ಅಧಿಕೃತ ಭೇಟಿ ಆಗಿತ್ತು.
ನೆಟ್ಟಣ ಚರ್ಚಿನ ಧರ್ಮಗುರು ಫಾ.ಆದರ್ಶ್ ಜೋಸೆಫ್ ಅವರ ನೇತೃತ್ವದಲ್ಲಿ ಧರ್ಮಕೇಂದ್ರದ ಸದಸ್ಯರು, ಟ್ರಸ್ಟಿಗಳು ಹಾಗೂ ಭಕ್ತರು ಬಿಷಪ್ ಜೇಮ್ಸ್ ಅವರನ್ನು ಸಾಂಪ್ರದಾಯಿಕ ರೀತಿಯಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.
ನಂತರ ಮಾತನಾಡಿದ ಬಿಷಪರು ಪ್ರೀತಿ, ಒಗ್ಗಟ್ಟು ಮತ್ತು ಮಾನವೀಯತೆ ಸಮಾಜದ ಮೂಲ ಸ್ತಂಭಗಳು. ಜಾತಿ–ಧರ್ಮ ಬೇಧವಿಲ್ಲದೆ ಮನುಷ್ಯ ಮನುಷ್ಯನಂತೆ ಕಾಣುವಾಗ ಮಾತ್ರ ನಿಜವಾದ ಸೌಹಾರ್ದತೆ ಸಾಧ್ಯ ಎಂದು ಸಂದೇಶ ನೀಡಿದರು.
ಬೆಳ್ತಂಗಡಿ ಧರ್ಮಪ್ರಾಂತ್ಯದ ಚಾನ್ಸೆಲ್ಲರ್ ಫಾ.ಲೋರೆನ್ಸ್, ಚರ್ಚಿನ ಟ್ರಸ್ಟಿಗಳಾದ ಜಿಬಿನ್, ಬೇಬಿ ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.






