

ಕೊಕ್ಕಡ: ಅರಸಿನಮಕ್ಕಿ ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹತ್ಯಡ್ಕ ಸಿಎ ಬ್ಯಾಂಕ್ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಮಹಿಳೆಯರು ಹಾಗೂ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿ ಗ್ರಾಮದಲ್ಲಿ ಬಗೆಹರಿಯದೇ ಉಳಿದಿರುವ ಸಮಸ್ಯೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸುತ್ತಮುತ್ತಲಿನ ಪರಿಸರದಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಸೆಂಟರ್ ಇಲ್ಲ, ಇದಕ್ಕಾಗಿ ಬೆಳ್ತಂಗಡಿ, ಪುತ್ತೂರಿಗೆ ಹೋಗಬೇಕು ಇದರಿಂದ ಗರ್ಭಿಣಿಯರಿಗೆ ಸಮಸ್ಯೆಯಾಗುತ್ತಿದೆ ಆದ್ದರಿಂದ ಕೊಕ್ಕಡದಲ್ಲಿ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಕೇಂದ್ರವನ್ನು ನಿರ್ಮಿಸಬೇಕೆಂದು ಆಶಾ ಕಾರ್ಯಕರ್ತೆಯರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತುರ್ತಾಗಿ ಘನತ್ಯಾಜ್ಯ ಘಟಕ ನಿರ್ಮಾಣದ ಅಗತ್ಯವಿದೆ ಸಂಜೀವಿನಿ ಒಕ್ಕೂಟ ಉತ್ತಮ ರೀತಿಯಲ್ಲಿ ಗ್ರಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಹಿಂದೂ ರುದ್ರ ಭೂಮಿ ನಿರ್ಮಾಣ ಕಾರ್ಯ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಕ್ರಮ ವಹಿಸಬೇಕು ಇದರ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ಹೇಳಿದಾಗ ರೆಖ್ಯಾದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಸರ್ವೇ ನಂಬರ್ 33/ಎ ಯಲ್ಲಿ 20 ಸೆಂಟ್ಸ್ ಜಾಗದ ಗಡಿ ಗುರುತು ಆಗಿದೆ ಮುಂದಿನ ಹಂತದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪಿಡಿಒ ತಿಳಿಸಿದರು. ಹಿಂದೂ ರುದ್ರ ಭೂಮಿ ಜಾಗದ ವಿಚಾರವಾಗಿ ಅರಣ್ಯ ಇಲಾಖೆಯ ಅಭಿಪ್ರಾಯಕ್ಕೆ ಸಲ್ಲಿಸಿದೆ ಎಂದು ಪಿಡಿಒ ತಿಳಿಸಿದರು. ಶೀಘ್ರವೇ ಎನ್ ಓಸಿ ನೀಡುವಂತೆ ಆರ್ ಎಫ್ ಓ ಗೆ ಶಾಸಕರು ಸೂಚಿಸಿದರು.
ರಸ್ತೆ ಬದಿ ಕೋಳಿ ತ್ಯಾಜ್ಯ ವಿಲೇವಾರಿ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದಾಗ ಕ್ರಮ ವಹಿಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ರೆಖ್ಯಾ 243 ಬೂತ್ ನಂಬರ್ ನಲ್ಲಿ ನೆಟ್ವರ್ಕ್ ಸಮಸ್ಯೆ ವ್ಯಾಪಕವಾಗಿದೆ ಇದರೊಂದಿಗೆ ವಿದ್ಯುತ್ ಸರಬರಾಜು ಇದ್ದರೆ ಮಾತ್ರ ಚಾಲ್ತಿಯಿರುತ್ತದೆ. ಹಳೆಯ ತಂತಿ ಬದಲಾವಣೆ, ಕುಟಾಂಲಪಲ್ಕೆ-ಬೂಡದಮಕ್ಕಿ ರಸ್ತೆಯ ಪ್ಯಾಚ್ ವರ್ಕ್ ಗೆ ಆಗ್ರಹ, ಲೋ ವೋಲ್ಟೇಜ್ ಸಮಸ್ಯೆ, ರೆಖ್ಯಾ ಗ್ರಾಮದಲ್ಲಿ ಕಾಡಾನೆ ಹಾವಳಿಯಿದ್ದು ರಸ್ತೆ ಬದಿ ದಾರಿ ದೀಪ ಅಳವಡಿಸಬೇಕು, ಶಿಕ್ಷಕರ ಕೊರತೆಯಿದೆ, ಅಕ್ರಮ-ಸಕ್ರಮ ಕಡತ ಬಗ್ಗೆ ಗ್ರಾಮಸ್ಥರು ಶಾಸಕರಲ್ಲಿ ಬೇಡಿಕೆಯನ್ನು ಇಟ್ಟರು.
ಕಡ್ತಿಮಾರ್ ಎಂಬಲ್ಲಿ ಗ್ರಾಮ ಪಂಚಾಯಿತಿ ರಸ್ತೆಯನ್ನು ಬಂದ್ ಮಾಡಿದ್ದಾರೆ ಎಂದು ಗ್ರಾಮಸ್ಥರೊಬ್ಬರು ಹೇಳಿದಾಗ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕ್ರಮ ವಹಿಸಲು ಸೂಚಿಸಿದರು. ಹತ್ಯಡ್ಕ ಹಾಗೂ ರೆಖ್ಯಾ ಗ್ರಾಮದ ಕೃಷಿಕರಿಗೆ ಬೆಳೆ ವಿಮೆ ಇನ್ನೂ ಜಮೆಯಾಗಿಲ್ಲ ಎಂದು ಗ್ರಾಮಸ್ಥರು ಶಾಸಕರ ಗಮನಕ್ಕೆ ತಂದರು.
ಅರಸಿನಮಕ್ಕಿ ಸಬ್ ಸ್ಟೇಷನ್ ನಿರ್ಮಾಣದ ಕುರಿತು ಗ್ರಾಮಸ್ಥರು ಆಗ್ರಹಿಸಿದರು. 195/2 ರಲ್ಲಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು ಇನ್ನೂ ಕಾಯ್ದಿರಿಸಿ ಬೇಕು ಎಂದು ಮೆಸ್ಕಾಂ ಎಇಇ ತಿಳಿಸಿದರು. ಜಾಗದ ಕಡತ ಎಸಿ ಕಚೇರಿಯಲ್ಲಿ ಮಂಜೂರಾತಿಯಾಗಲು ಬಾಕಿ ಉಳಿದಿದೆ ಎಂದು ಆರ್ ಐ ತಿಳಿಸಿದಾಗ ಎಸಿಯೊಂದಿಗೆ ವಿಚಾರಿಸಿ ಸುವುದಾಗಿ ಶಾಸಕರು ತಿಳಿಸಿದರು.
ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಬರಬೇಕು ಎಂದು ಗ್ರಾಮಸ್ಥರು ಹೇಳಿದಾಗ ತಾಲೂಕಿನ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ ಇದೆ ಎಂದು ಇಓ ತಿಳಿಸಿದರು. ರೆಖ್ಯಾದಲ್ಲಿ ಜೆಜೆಎಂ ಕಾಮಗಾರಿ ಅಸಮರ್ಪಕವಾಗಿ ನಡೆಸಲಾಗಿದೆ ಆದರೆ ಪಿಡಿಒ ಕಾಮಗಾರಿ ಪೂರ್ಣಗೊಳಿಸದೆ ಪಂಚಾಯತ್ ಹಸ್ತಾಂತರ ತೆಗೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಹೇಳಿದಾಗ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಂಡ ಬಳಿಕವೇ ಹಸ್ತಾಂತರ ಪ್ರಕ್ರಿಯೆ ನಡೆಸಬೇಕು ಎಂದು ಶಾಸಕರು ಇಓಗೆ ಸೂಚನೆ ನೀಡಿದರು.
ಸಂಜೀವಿನಿ ಒಕ್ಕೂಟದ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಆಯಿಲ್ ಮಿಲ್ ಘಟಕದ ಅವಶ್ಯಕತೆ ಇದೆ ಮತ್ತು ಸಂಜೀವಿನಿ ಒಕ್ಕೂಟಕ್ಕೆ ಸ್ವಂತ ಕಟ್ಟಡ ಬೇಕು ಎಂದು ಸಂಜೀವಿನಿ ಮಹಿಳೆಯರು ಹೇಳಿದಾಗ ಇಓ ಈ ಬಗ್ಗೆ ನಿಮ್ಮೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಹೇಳಿದರು.
ಕಳೆದ ಎರಡು ವರ್ಷಗಳಿಂದ ವಿವಿಧ ನಿಗಮಗಳ ಅಭಿವೃದ್ಧಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ ಸರ್ಕಾರ ಐದು ಕೆಪಿಎಸ್ ಶಾಲೆ ಒದಗಿಸಿದರೆ 1 ಶಾಲೆಯನ್ನು ಅರಸಿನಮಕ್ಕಿಗೆ ನೀಡಲಾಗುವುದು ಎಂದು ಶಾಸಕರು ತಿಳಿಸಿದರು. 69/1 ಸವೇ ನಂಬರ್ ನ ಜಂಟಿ ಸರ್ವೇ ಜಾಗದ ಕುರಿತು ಸಚಿವರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದೆ. ಅದು ಪರಿಪೂರ್ಣ ಆಗಾದೆ ಇದ್ದಲ್ಲಿ ಜನರೊಂದಿಗೆ ಹೋರಾಟ ನಡೆಸಲಾಗುವುದು ಒಂದುವೇಳೆ ಆ ಕಡತವನ್ನು ತಿರಸ್ಕರಿಸಿದಲ್ಲಿ ಜನರಿಗಾಗಿ ನ್ಯಾಯಾಲಯದ ಮೊರೆ ಹೋಗಲಾಡಿಸುವುದು ಎಂದು ಶಾಸಕರು ತಿಳಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ , ಉಪಾಧ್ಯಕ್ಷ ಸುಧೀರ್, ತಾಲೂಕು ಪಂಚಾಯತ್ ಇಓ ಭವಾನಿ ಶಂಕರ್, ಕಂದಾಯ ನಿರೀಕ್ಷಕ ಪಾವಡಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಗೌಡ, ಸದಸ್ಯರು, ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.






