


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯದ ಕೌಕ್ರಾಡಿ ಧರ್ಮಶ್ರೀ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ “ಮಕ್ಕಳ ಶಿಕ್ಷಣ – ಪೋಷಕರ ನಿರೀಕ್ಷೆಗಳು ಹಾಗೂ ಶಿಕ್ಷಣದ ಮಹತ್ವ” ಕುರಿತು ಜಾಗೃತಿ ಕಾರ್ಯಕ್ರಮ ಹೊಸಮಜಲು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಎಸ್ಡಿಎಂಸಿ ಅಧ್ಯಕ್ಷ, ನೆಲ್ಯಾಡಿ ಶೌರ್ಯ ಘಟಕದ ರಮೇಶ್ ಬಾಣಜಾಲು ಸಭಾಧ್ಯಕ್ಷತೆ ವಹಿಸಿದರು.
ಯೋಜನೆಯ ಸಂಪನ್ಮೂಲ ವ್ಯಕ್ತಿ, ನೆಲ್ಯಾಡಿ ಜೆಸಿಐ ಪೂರ್ವಾಧ್ಯಕ್ಷೆ ಸುಚಿತ್ರಾ ಜೆ. ಬಂಟ್ರಿಯಾಲ್ ಮಾತನಾಡಿ, “ಮಕ್ಕಳಿಗೆ ಪುಸ್ತಕ ಪಾಠ ಸಾಕಾಗುವುದಿಲ್ಲ, ಜೀವನ ಪಾಠ ಅಗತ್ಯ. ತಂದೆ-ತಾಯಿ ಮಕ್ಕಳ ಮೊದಲ ಗುರುಗಳು; ಶಾಲೆಯ ಶಿಕ್ಷಕರು ಎರಡನೇ ಗುರುಗಳು. ಎರಡೂ ಕಡೆ ಜವಾಬ್ದಾರಿಯುತ ಸಹಕಾರ ಇರಬೇಕಷ್ಟೇ ಮಕ್ಕಳ ಭವಿಷ್ಯ ಗಟ್ಟಿಯಾಗುತ್ತದೆ” ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ನೆಲ್ಯಾಡಿ ಹೊರಠಾಣಾಧಿಕಾರಿ ಪ್ರವೀಣ್ ಕುಮಾರ್, ರಸ್ತೆ ಸುರಕ್ಷತೆ ಕುರಿತಂತೆ “ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು, ಲೈಸನ್ಸ್ ಇಲ್ಲದೇ ಚಾಲನೆ ಕಾನೂನು ಅಪರಾಧ. ಸೀಟ್ಬೆಲ್ಟ್ ಸೀಟ್ ಬೆಲ್ಟ್ ಧರಿಸುವುದು, ರಸ್ತೆ ಸುರಕ್ಷತೆಯ ನಿಯಮ ಪಾಲಿಸಿ—ಜೀವ ಉಳಿಸಿಕೊಳ್ಳಿ” ಎಂದು ಪೋಷಕರು ಹಾಗೂ ವಿದ್ಯಾರ್ಥಿಗಳನ್ನು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ನೆಲ್ಯಾಡಿ ಹೊರಠಾಣಾಧಿಕಾರಿ ರವಿರಾಜ್, ಎಸ್ಡಿಎಂಸಿ ಉಪಾಧ್ಯಕ್ಷ ಅಜೀಜ್, ಜ್ಞಾನವಿಕಾಸ ಕೇಂದ್ರ ಸಂಯೋಜಕಿ ವಸಂತಿ ಜೆ. ಉಪಸ್ಥಿತರಿದ್ದರು.
ಎಸ್ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಧರ್ಮಶ್ರೀ ಜ್ಞಾನವಿಕಾಸ ಕೇಂದ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸೇವಾ ಪ್ರತಿನಿಧಿ ನಮಿತಾ ಎಸ್. ಶೆಟ್ಟಿ ಸ್ವಾಗತಿಸಿದರು. ಶಾಲಾ ಮುಖ್ಯಗುರು ಪ್ರೇಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.





