ಬಿಳಿನೆಲೆಯಲ್ಲಿ ಸಾರಿ ಗೊಂಡೆ–ಸಾರಿ ಪೋಲ್ಡಿಂಗ್ ತರಬೇತಿ ಆರಂಭ

ಶೇರ್ ಮಾಡಿ

ವೃತ್ತಿಯನ್ನು ಗೌರವಿಸಿದರೆ ವ್ಯಕ್ತಿತ್ವ ವೃದ್ಧಿ—ಕಡಬ ಯೋಜನಾಧಿಕಾರಿ ಪ್ರಕಾಶ್ ಕುಮಾರ್

ಬಿಳಿನೆಲೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆ ವತಿಯಿಂದ ಬಿಳಿನೆಲೆ ವಲಯದ ಸ್ವಸಹಾಯ ಸಂಘದ ಸದಸ್ಯರು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಮತ್ತು ಅವರ ಮಕ್ಕಳಿಗೆ ಸಾರಿಗೊಂಡೆ ತಯಾರಿ ಹಾಗೂ ಸಾರಿ ಪೋಲ್ಡಿಂಗ್ ಸ್ವಉದ್ಯೋಗ ತರಬೇತಿ ಕಾರ್ಯಕ್ರಮ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಾಲಯ ಸಭಾಭವನದಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು.

ಐದು ದಿನಗಳ ಕಾಲ ನಡೆಯಲಿರುವ ಈ ತರಬೇತಿ ಶಿಬಿರವನ್ನು ಉದ್ಘಾಟಿಸಿದ ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ದಿನೇಶ್ ಅವರು ಮಾತನಾಡಿ, “ಉದ್ಯೋಗವು ಜೀವನದ ಮಹತ್ವದ ಅಂಶ. ನಿಷ್ಟೆಯಿಂದ ಮಾಡುವ ಉದ್ಯೋಗ ಕುಟುಂಬದ ಆರ್ಥಿಕಾಭಿವೃದ್ಧಿ ಜೊತೆಗೆ ಸಮಾಜದ ಪ್ರಗತಿಗೂ ಪೂರಕವಾಗುತ್ತದೆ” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿ, “ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರ ದಿವ್ಯ ದೃಷ್ಟಿಯಿಂದ ರೂಪಿತವಾದ ಗ್ರಾಮೀಣ ಶ್ರೇಷ್ಟತಾ ಕೇಂದ್ರವು ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿಗೆ ಮಹತ್ವದ ತರಬೇತಿಗಳನ್ನು ನೀಡುತ್ತಿದೆ. ಬಿಳಿನೆಲೆ ವಲಯದಲ್ಲಿ ಉದ್ಯೋಗಕ್ಕೆ ಆಸಕ್ತರನ್ನು ಗುರುತಿಸಿ ನಡೆಸಲಾಗುತ್ತಿರುವ ಸಾರಿ ಗೊಂಡೆ ಹಾಗೂ ಸಾರಿ ಪೋಲ್ಡಿಂಗ್ ತರಬೇತಿ ಎಲ್ಲರಿಗೂ ಉಪಯೋಗವಾಗಬೇಕು. ಮಾಡುವ ವೃತ್ತಿಯನ್ನು ಗೌರವಿಸಿದರೆ ವ್ಯಕ್ತಿತ್ವ ವೃದ್ಧಿ, ನೆಮ್ಮದಿಯ ಜೀವನ ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೆ ಬಿಳಿನೆಲೆ ಒಕ್ಕೂಟದ ಅಧ್ಯಕ್ಷ ರಾಜೇಶ್ ಒಗ್ಗು ಅಧ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ಗ್ರಾಮೀಣ ಶ್ರೇಷ್ಟತಾ ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಧರಣಿ ಅವರು ಶಿಬಿರಾರ್ಥಿಗಳಿಗೆ ಐದು ದಿನಗಳ ಉಚಿತ ತರಬೇತಿ, ದಾಖಲಾತಿ ನಿರ್ವಹಣೆ ಮತ್ತು ಸೌಲಭ್ಯಗಳ ಕುರಿತು ವಿವರಿಸಿದರು.

ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಗೌಡ ಒಗ್ಗು ಮತ್ತು ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತರಬೇತಿ ಶಿಕ್ಷಕಿ ಸೌಮ್ಯ ಅವರು ತರಬೇತಿ ಅವಧಿಯಲ್ಲಿ ಕಲಿಸಲಿರುವ ಗೊಂಡೆ ತಯಾರಿ ಮತ್ತು ಸಾರಿ ಪೋಲ್ಡಿಂಗ್‌ನ ಪ್ರಾಯೋಗಿಕ ತರಗತಿಗಳ ಕುರಿತಾಗಿ ಮಾಹಿತಿ ನೀಡಿದರು.

ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ಜ್ಞಾನದೀಪ ಜ್ಞಾನವಿಕಾಸದ ಸಂಯೋಜಕಿ ಉಷಾ ಸತೀಶ್ ವಂದಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಚೇತನಾ ಕಾರ್ಯಕ್ರಮ ನಿರೂಪಿಸಿದರು.

ಫೆ.16ರಿಂದ 20ರ ವರೆಗೆ ನಡೆಯುವ ತರಬೇತಿಗೆ 29 ಅಭ್ಯರ್ಥಿಗಳು ನೊಂದಾಯಿಸಿ ಸಕ್ರಿಯವಾಗಿ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ.

Leave a Reply

error: Content is protected !!