ಕಡಬ: ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಬಳಸಿದ ಪ್ರಕರಣ: ಸ್ಥಳಕ್ಕೆ ಡಿವೈಎಸ್‌ಪಿ ರೋಹಿಣಿ ಭೇಟಿ

ಶೇರ್ ಮಾಡಿ

ರಾಮಕುಂಜ: ಬಾವಿ ತೋಡುವ ಸಂದರ್ಭದಲ್ಲಿ ಸ್ಪೋಟಕ ಸ್ಫೋಟಿಸಿರುವುದರಿಂದ ಮನೆಗಳಿಗೆ ಹಾನಿಯಾಗಿರುವ ರಾಮಕುಂಜ ಗ್ರಾಮದ ಕಂಪಕ್ಕೆ ಬೆಳ್ತಂಗಡಿ ಡಿವೈಎಸ್‌ಪಿ ರೋಹಿಣಿ ಸಿ.ಕೆ.ಅವರು ಮಾ.11ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಮೈಸೂರು ನಿವಾಸಿ ಸೋಮಶೇಖರ ಎಂಬವರು ತಮ್ಮ ಜಾಗದಲ್ಲಿ ನೀರಿಗಾಗಿ ಬಾವಿ ತೋಡುವ ಕೆಲಸ ಮಾಡಿಸುತ್ತಿದ್ದು ಈ ವೇಳೆ ಕೋಡಿಂಬಾಳ ನಿವಾಸಿ ಶಿವರಾಮ ಎಂಬವರು ಬಾವಿಯೊಳಗೆ ಕಲ್ಲು ಹುಡಿ ಮಾಡಲು ಸ್ಫೋಟಕ ಸ್ಫೋಟಿಸಿದ ಪರಿಣಾಮ ಪರಿಸರದ ವಾಮನ ಮೂಲ್ಯ ಹಾಗೂ ಕೆ.ಟಿ.ಮೋಹನ ಎಂಬವರ ಮನೆಗೆ ಹಾನಿಯಾಗಿತ್ತು. ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಮಧ್ಯೆ ಬಾವಿಯೊಳಗೆ ಸ್ಫೋಟಕವಾಗದೇ ಜೀವಂತವಾಗಿರುವ ಸ್ಫೋಟಕಗಳ ತೆರವುಗೊಳಿಸುವ ನಿಟ್ಟಿನಲ್ಲಿ ಮಾ.10ರಂದು ಮಂಗಳೂರಿನಿಂದ ಆಗಮಿಸಿದ್ದ ಬಾಂಬ್ ನಿಷ್ಕ್ರೀಯದಳದ ಸಿಬ್ಬಂದಿಗಳು ಬಾವಿಯೊಳಗೆ ಇಳಿದು ಕಾರ್ಯಾಚರಣೆ ಕೈಗೊಂಡಿದ್ದರು. ಬಾವಿಯೊಳಗಿರುವ 6 ಜೀವಂತ ಸ್ಫೋಟಕಗಳ ಪೈಕಿ ಒಂದನ್ನು ತೆರವುಗೊಳಿಸಿ ಉಳಿದ ಸ್ಫೋಟಕಗಳನ್ನು ಕಂಪ್ರೆಸರ್ ಬಳಸಿ ತೆರವುಗೊಳಿಸಲು ನಿರ್ಧರಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.

ಕೋರ್ಟ್ ಅನುಮತಿ ಪಡೆಯಲು ನಿರ್ಧಾರ;
ಮಾ.11ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿವೈಎಸ್‌ಪಿ ರೋಹಿಣಿ ಸಿ.ಕೆ.ಅವರು, ಕಂಪ್ರೆಸರ್ ಬಳಸಿ ಬಾವಿಯೊಳಗಿರುವ ಸ್ಫೋಟಕ ತೆರವುಗೊಳಿಸುವುದು ಅಪಾಯಕಾರಿಯಾಗಿರುವುದರಿಂದ ಕೋರ್ಟ್ ಅನುಮತಿ ಪಡೆದು ಕಾರ್ಯಾಚರಣೆ ಮುಂದುವರಿಸುವಂತೆ ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ. ಅದರಂತೆ ಕೋರ್‍ಟ್ ಅನುಮತಿ ದೊರೆತ ಬಳಿಕ ಕಾರ್ಯಾಚರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಡಿವೈಎಸ್‌ಪಿ ಭೇಟಿ ವೇಳೆ ಕಡಬ ಎಸ್‌ಐ ಜಂಬೂರಾಜ್ ಮಹಾಜನ್, ಸಿಬ್ಬಂದಿಗಳು ಉಪಸ್ಥಿತರಿದ್ದರು. ಘಟನಾ ಸ್ಥಳಕ್ಕೆ ಮಾ.11ರಂದು ಬೆಳಿಗ್ಗೆ ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಗಳೂ ಆಗಮಿಸಿದ್ದರು.

Leave a Reply

error: Content is protected !!