




ಕೊಕ್ಕಡ: ಬೆಂಗಳೂರು ಎಪಿಡಿ ಸಂಸ್ಥೆಯ ಸಹಕಾರದೊಂದಿಗೆ ದಿವ್ಯಾಂಗರಿಗೆ ನೆರವಾಗುವ ಉದ್ದೇಶದಿಂದ ಸೌತಡ್ಕ ಸೇವಾಧಾಮವು ಈ ವರ್ಷ ಒಟ್ಟು 100 ಗಾಲಿಕುರ್ಚಿಗಳನ್ನು ವಿತರಿಸುವ ಯೋಜನೆಯನ್ನು ಕೈಗೊಂಡಿದೆ. ಅದರ ಭಾಗವಾಗಿ ಮಾ.15ರಂದು ಸೌತಡ್ಕ ಸೇವಾಧಾಮದಲ್ಲಿರುವ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಗಾಲಿಕುರ್ಚಿ ವಿತರಣಾ ಕಾರ್ಯಕ್ರಮ ನಡೆಯಿತು.
ಈ ಯೋಜನೆಯಡಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸೇವಾಧಾಮವು 8ನೇ ವರ್ಷದ ಪಾದಾರ್ಪಣೆ ಅಂಗವಾಗಿ 30 ಗಾಲಿಕುರ್ಚಿಗಳನ್ನು ವಿತರಿಸಿತ್ತು. ಇದೀಗ ಎರಡನೇ ಹಂತವಾಗಿ 32 ಗಾಲಿಕುರ್ಚಿಗಳನ್ನು ವಿತರಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಉಡುಪಿಯ ನಿಹಾಲ್ ವಿಲ್ಸನ್, ಕಾರ್ಕಳದ ಸಂದೀಶ್ ಹಾಗೂ ಆತ್ರಾಡಿಯ ರಮೇಶ್ ನಾಯ್ಕ್ ಅವರಿಗೆ ಗಾಲಿಕುರ್ಚಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ನಿವೃತ್ತ ಮಹಿಳಾ ಆರೋಗ್ಯ ಸಂದರ್ಶಕಿ ಹಾಗೂ ಸೇವಾಭಾರತಿ ಪೋಸ್ ಸಮಿತಿಯ ಅಧ್ಯಕ್ಷೆ ವಸಂತಿ ಗೌಡ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ದಿವ್ಯಾಂಗರಿಗೆ ಶುಭ ಹಾರೈಸಿ, ಬದುಕಿನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದೆ ಸಾಗುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಜಿಲ್ಲಾ ಸಹ ಪ್ರಚಾರ ಪ್ರಮುಖ ಗಣೇಶ್ ಕೊಕ್ಕಡ, ಮಾಳವಿಕ ಕೊಕ್ಕಡ , ಸೇವಾಭಾರತಿ ಅಧ್ಯಕ್ಷ ವಿನಾಯಕ ರಾವ್ ಹಾಗೂ ಟ್ರಸ್ಟಿ ಸ್ವರ್ಣಗೌರಿ ಉಪಸ್ಥಿತರಿದ್ದರು.





