ವಿದ್ಯುತ್ ಕಂಬ ಎತ್ತುವ ವೇಳೆ ದುರ್ಘಟನೆ: ಕಾರ್ಮಿಕ ಸ್ಥಳದಲ್ಲೇ ಸಾವು

ಶೇರ್ ಮಾಡಿ
ಕೊಕ್ಕಡ: ವಿದ್ಯುತ್ ಕಂಬ ಎತ್ತುವ ವೇಳೆ ದುರ್ಘಟನೆ: ಕಾರ್ಮಿಕ ಸ್ಥಳದಲ್ಲೇ ಸಾವು
ಸಾಂದರ್ಭಿಕ ಫೋಟೋ

ಕೊಕ್ಕಡ: ವಿದ್ಯುತ್ ಕಂಬವನ್ನು ಮೇಲಕ್ಕೆ ಎತ್ತುವ ವೇಳೆ ಕಂಬವು ತಲೆಗೆ ಬಡಿದು ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಕೊಕ್ಕಡ ಗ್ರಾಮದ ಮಹಾವೀರ ಕಾಲೋನಿ ನಿವಾಸಿ ಶಿವಪ್ಪ(37) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ವಿದ್ಯುತ್ ಲೈನ್ ಕಂಬಗಳ ಅಳವಡಿಕೆ ಹಾಗೂ ಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದ ಶಿವಪ್ಪ ಅವರು ಸ್ಥಳೀಯವಾಗಿ ವಿವಿಧ ಕಡೆಗಳಲ್ಲಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದರು.

ಸೋಮವಾರ ಬೆಳಗ್ಗೆ ಎಂದಿನಂತೆ ಧರ್ಮಸ್ಥಳ ಸಮೀಪದ ಪ್ರದೇಶದಲ್ಲಿ ವಿದ್ಯುತ್ ಕಂಬ ಅಳವಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಸಂಜೆ ವೇಳೆಗೆ ಕೊಕ್ಕಡದ ಭಜನಾ ಮಂದಿರದ ಸಮೀಪ ಹಳೆಯ ವಿದ್ಯುತ್ ಕಂಬವನ್ನು ಮೇಲಕ್ಕೆ ಎತ್ತುವ ಕಾರ್ಯ ನಡೆಯುತ್ತಿದ್ದ ವೇಳೆ ಏಕಾಏಕಿ ಕಂಬವು ನಿಯಂತ್ರಣ ತಪ್ಪಿ ಶಿವಪ್ಪ ಅವರ ತಲೆಗೆ ಬಡಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಬಳಿಕ ಮೃತದೇಹವನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

Leave a Reply

error: Content is protected !!