ಬೈಕ್–ಆಟೋ ರಿಕ್ಷಾ ಡಿಕ್ಕಿ, ಸವಾರನಿಗೆ ಗಾಯ

ಶೇರ್ ಮಾಡಿ

 

ಬೈಕ್–ಆಟೋ ರಿಕ್ಷಾ ಡಿಕ್ಕಿ, ಸವಾರನಿಗೆ ಗಾಯ

ನೆಲ್ಯಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಏ.5ರಂದು ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಗಾಯಗೊಂಡವರು ನೆಲ್ಯಾಡಿ ಗ್ರಾಮದ ಪಡುಬೆಟ್ಟು ನಿವಾಸಿ ವಿನ್ಸೆಂಟ್ ರೋಹಿತ್ ಡಿ.ಸೋಜಾ(30) ಎಂದು ಗುರುತಿಸಲಾಗಿದೆ. ಇವರು ನೆಲ್ಯಾಡಿಯಿಂದ ಉಪ್ಪಿನಂಗಡಿ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ವಳಾಲು ತಲುಪುತ್ತಿದ್ದಂತೆ ಅಪಘಾತ ಸಂಭವಿಸಿದೆ. ಇದೇ ವೇಳೆ, ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆಗೆ ಬರುತ್ತಿದ್ದ ಸಿರಾಜ್ ಎಂಬವರು ಆಟೋ ರಿಕ್ಷಾವನ್ನು ಏಕಮುಖ ರಸ್ತೆಯಲ್ಲಿ ತಪ್ಪು ಬದಿಯಲ್ಲಿ ಚಲಾಯಿಸಿದ ಪರಿಣಾಮ ಬೈಕ್‌ಗೆ ಡಿಕ್ಕಿಯಾಗಿದೆ ಎಂದು ತಿಳಿದುಬಂದಿದೆ. ಡಿಕ್ಕಿ ಪರಿಣಾಮ ವಿನ್ಸೆಂಟ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ.

ಗಾಯಾಳುವಿಗೆ ತಕ್ಷಣ ಉಪ್ಪಿನಂಗಡಿ ಸೂರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ನಂತರ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಒಳರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

Leave a Reply

error: Content is protected !!