ಗ್ರಾಹಕ ಸ್ನೇಹಿ ಸೇವೆಯಿಂದ ಜನಮನ ಗೆದ್ದ ಅಧಿಕಾರಿಗಳು : ಉಷಾ ಅಂಚನ್






ನೆಲ್ಯಾಡಿ: ನೆಲ್ಯಾಡಿ ಶಾಖೆಯ ಕೆನರಾ ಬ್ಯಾಂಕ್ ಮ್ಯಾನೇಜರ್ ವಿವಿನ್ ಹಾಗೂ ಸಿಬ್ಬಂದಿಗಳಾದ ಜಿತೇಶ್ ಮತ್ತು ಶರಣ್ಯ ಅವರಿಗೆ ನೆಲ್ಯಾಡಿ ಕಾಮಧೇನು ಮಹಿಳಾ ಸಹಕಾರಿ ಸಂಘದ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.
ಗ್ರಾಮದ ಜನತೆಗೆ ಹಾಗೂ ಸಹಕಾರಿ ಸಂಘಕ್ಕೆ ಬ್ಯಾಂಕ್ ಸಿಬ್ಬಂದಿಗಳು ನೀಡಿದ ಉತ್ತಮ ಸಹಕಾರ, ಸ್ನೇಹಪರ ಸೇವೆ ಮತ್ತು ತ್ವರಿತ ಸ್ಪಂದನೆಯನ್ನು ಸ್ಮರಿಸಿ, ಇದೀಗ ವರ್ಗಾವಣೆಯ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸಂಘದ ವತಿಯಿಂದ ಅವರನ್ನು ಗೌರವಿಸಿ ಅಭಿನಂದನೆ ಸಲ್ಲಿಸಿ ಶುಭ ಹಾರೈಸಲಾಯಿತು.
ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಉಷಾ ಅಂಚನ್ ಮಾತನಾಡಿ ಬ್ಯಾಂಕ್ ಎನ್ನುವುದು ಕೇವಲ ಹಣಕಾಸು ವ್ಯವಹಾರದ ಕೇಂದ್ರವಲ್ಲ, ಜನರ ನಂಬಿಕೆಯ ಪ್ರತೀಕವಾಗಿದೆ. ನೆಲ್ಯಾಡಿ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಗ್ರಾಮೀಣ ಜನರೊಂದಿಗೆ ಆತ್ಮೀಯತೆಯಿಂದ ನಡೆದುಕೊಂಡು ಉತ್ತಮ ಸೇವೆ ನೀಡಿರುವುದು ಶ್ಲಾಘನೀಯ. ನಮ್ಮ ಸಂಘದ ವಿವಿಧ ಹಣಕಾಸು ಚಟುವಟಿಕೆಗಳಿಗೆ ಅವರು ನೀಡಿದ ಸಹಕಾರವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಗಾವಣೆಗೊಂಡು ಹೋಗುತ್ತಿದ್ದರೂ ಅವರು ನೀಡಿದ ಸೇವೆಯ ನೆನಪು ಸದಾ ಉಳಿಯಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ಚೈತನ್ಯ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.



