ನೇತ್ರಾವತಿಯಲ್ಲಿ ಈಜಲು ಇಳಿದ ಇಂಜಿನಿಯರಿಂಗ್ ವಿದ್ಯಾರ್ಥಿ ದಾರುಣ ಸಾವು

ಶೇರ್ ಮಾಡಿ

ಬೆಳ್ತಂಗಡಿ ಕಲ್ಮಂಜ ಸಮೀಪ ಘಟನೆ; ನಾಲ್ಕು ಗಂಟೆಗಳ ಶೋಧ ಬಳಿಕ ಮೃತದೇಹ ಪತ್ತೆ

 

ನೇತ್ರಾವತಿಯಲ್ಲಿ ಈಜಲು ಇಳಿದ ಇಂಜಿನಿಯರಿಂಗ್ ವಿದ್ಯಾರ್ಥಿ ದಾರುಣ ಸಾವು

ಬೆಳ್ತಂಗಡಿ:ಕಲ್ಮಂಜ ಗ್ರಾಮದ ಪಜಿರಡ್ಕದ ಕೆಳಭಾಗದಲ್ಲಿ ಹರಿಯುವ ನೇತ್ರಾವತಿ ನದಿಗೆ ಇಳಿದಿದ್ದ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಸಂಜೆ ನಡೆದಿದೆ.

ಉಜಿರೆಯ ಇಂಜಿನಿಯರಿಂಗ್ ಕಾಲೇಜೊಂದರ ಏಳೆಂಟು ಮಂದಿ ವಿದ್ಯಾರ್ಥಿಗಳು ನೇತ್ರಾವತಿ ನದಿಯ ಕಲ್ಲಗುಂಡಿ ಎಂಬ ಸ್ಥಳದಲ್ಲಿ ನದಿ ನೀರಿಗೆ ಸ್ನಾನಕ್ಕೆ ಇಳಿದಿದ್ದರು.ಇವರ ಪೈಕಿ ಗೋಕಾಕ ಮೂಲದ, ಇಂಜಿನಿಯರಿಂಗ್ ಕೊನೆಯ ವರ್ಷದ ವಿದ್ಯಾರ್ಥಿ ಶ್ರೀಪೂರ್ಣ(22) ಎಂಬಾತ ನದಿಯ ಹೊಂಡದಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ.

ಇವರಲ್ಲಿ ಯಾರಿಗೂ ಈಜು ಬರದಿದ್ದು ಘಟನೆ ನಡೆಯುತ್ತಿದ್ದಂತೆ ಉಳಿದ ವಿದ್ಯಾರ್ಥಿಗಳು ಬೊಬ್ಬೆ ಹಾಕಿದ್ದು ಕೂಡಲೇ ಸ್ಥಳೀಯರು ಆಗಮಿಸಿ ಹುಡುಕಾಟ ನಡೆಸಿದ್ದಾರೆ. ಬಳಿಕ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು, ಅಗ್ನಿಶಾಮಕ ದಳ, ಧರ್ಮಸ್ಥಳ ಪೊಲೀಸರು ಆಗಮಿಸಿ ಸುಮಾರು ನಾಲ್ಕು ಗಂಟೆಗಿಂತ ಅಧಿಕ ಕಾಲ ನದಿಯಲ್ಲಿ ಹುಡುಕಾಟ ನಡೆಸಿದ್ದು ರಾತ್ರಿ 9:30ರ ವೇಳೆಗೆ ಮೃತದೇಹ ಪತ್ತೆಯಾಗಿದೆ.

ಘಟನಾ ಸ್ಥಳದಲ್ಲಿ ಭಾರಿ ಸಂಖ್ಯೆಯ ಜನರು ಜಮಾಯಿಸಿದ್ದರು. ಘಟನೆ ಸಂಜೆ ನಡೆದಿದ್ದು ಹುಡುಕಾಟಕ್ಕೆ ಬೆಳಕಿನ ಅಭಾವವು ಕಂಡುಬಂತು. ಕಳೆದ ಕೆಲವು ದಿನಗಳಿಂದ ನದಿಯಲ್ಲಿ ನೀರಿನ ಹರಿವು ಅಧಿಕವಾಗಿದೆ.

 

Leave a Reply

error: Content is protected !!