ಉಪ್ಪಿನಂಗಡಿ: ಸ್ನೇಹಾಚಾರದ ಸಲುಗೆಯನ್ನು ಬಳಸಿ ಬೈಕ್ ಪಡೆದು ಪರಾರಿ

ಶೇರ್ ಮಾಡಿ

 

ಉಪ್ಪಿನಂಗಡಿ: ಸ್ನೇಹಾಚಾರದ ಸಲುಗೆಯನ್ನು ಬಳಸಿ ಬೈಕ್ ಪಡೆದು ಪರಾರಿ

ಉಪ್ಪಿನಂಗಡಿ: ಒಂದೆರಡು ದಿನದ ಪರಿಚಯವನ್ನು ಬಳಸಿ ಸ್ನೇಹಾಚಾರದ ಸಲುಗೆಯನ್ನು ನಟಿಸಿ ದೇಗುಲಕ್ಕೆ ಹೋಗಿ ಬರುವೆನೆಂದು ತಿಳಿಸಿ ಬೈಕನ್ನು ಪಡೆದು ಹೋದಾತ ಬೈಕನ್ನು ಹಿಂತಿರುಗಿಸದೆ, ಬೈಕ್ ಬೇಕಾದರೆ ಇಪ್ಪತ್ತು ಸಾವಿರ ಕೊಡಬೇಕೆಂದು ತಾಕೀತು ಮಾಡಿದ ವಿಲಕ್ಷಣ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಇಲ್ಲಿನ ರಾಜಧಾನಿ ಬಿಲ್ಡಿಂಗ್‍ನಲ್ಲಿ ಸ್ಟಿಕ್ಕರ್ ಕಂಟಿಂಗ್ಸ್ ಸೆಂಟರ್ ಮಾಲಕ ಶೀನಪ್ಪ ಎಂಬವರೇ ಸಹಾಯ ಮಾಡಲು ಹೋಗಿ ಮೋಸ ಹೋದವರು. ಅದೇ ಕಟ್ಟಡದಲ್ಲಿನ ಲಾಡ್ಜ್ ನಲ್ಲಿ 3 ದಿನಗಳಿಂದ ವಾಸ್ತವ ಹೂಡಿದ್ದ, ಅಲ್ಲಿಗೆ ನೀಡಲಾದ ಆಧಾರ್ ಕಾರ್ಡ್‍ನಲ್ಲಿರುವ ದಾಖಲೆಯಂತೆ ಶ್ಯಾಮ್ ಜಿ. ಕೃಷ್ಣನ್ ಎಂಬಾತನೇ ವಂಚನೆಗೈದ ಆರೋಪಿಯಾಗಿದ್ದಾನೆ.

ಸಕಲೇಶಪುರ ತಾಲ್ಲೂಕು ಹಲಸುಲಿಗೆ, ಅಚಂಗಿ ಮನೆ ನಿವಾಸಿ ಗೋಪಾಲಕೃಷ್ಣನ್ ಎಂಬವರ ಮಗನಾಗಿರುವ ಶ್ಯಾಮ್ ಜಿ. ಕೃಷ್ಣನ್, ಸ್ಟಿಕ್ಕರ್ ಕಂಟಿಂಗ್ ಸೆಂಟರ್ ಗೆ ಬಂದು ಆತ್ಮೀಯತೆಯನ್ನು ನಟಿಸುತ್ತಿದ್ದು, ಮಂಗಳವಾರ ಬೆಳಗ್ಗೆ ಬಂದಾತ “ಒಮ್ಮೆ ಬೈಕ್ ಕೊಡಿ. ದೇವಸ್ಥಾನದಲ್ಲಿನ ನನ್ನ ಮನೆಯವರಿಗೆ ಬಟ್ಟೆ ಕೊಟ್ಟು ಎರಡೇ ನಿಮಿಷದಲ್ಲಿ ಹಿಂತಿರುಗುತ್ತೇನೆಂದು” ತಿಳಿಸಿದ್ದ. ಪ್ರಾರಂಭದಲ್ಲಿ ಬೈಕ್ ನೀಡಲು ಹಿಂದೇಟು ಹಾಕಿದ್ದ ಶೀನಪ್ಪ ಬಳಿಕ ನೀಡಿದ್ದರು.

2 ನಿಮಿಷದೊಳಗೆ ಬರುತ್ತೇನೆಂದು ಬೈಕಿನೊಂದಿಗೆ ಹೋದಾತ ಗಂಟೆ ಕಳೆದರೂ ಬಾರದಿದ್ದಾಗ ಕಳವಳಗೊಂಡು ಆತನಿಗೆ ಫೋನು ಮಾಡಿ ವಿಚಾರಿಸಿದರು. ಮೊದ ಮೊದಲು ಬೈಕ್‍ನ್ನು ದೇವಸ್ಥಾನದ ಪರಿಸರದಲ್ಲಿ ಇರಿಸಿದ್ದೇನೆಂದು ತಿಳಿಸಿ, ತಾನು ಸಕಲೇಶಪುರದಲ್ಲಿ ಇದ್ದೇನೆಂದೂ, ಬೈಕ್ ಬೇಕಾದರೆ ಇಪ್ಪತ್ತು ಸಾವಿರ ಹಣದೊಂದಿಗೆ ಸಕಲೇಶಪುರಕ್ಕೆ ಬಂದು ಹಣ ಕೊಟ್ಟು ಬೈಕ್ ತೆಗೆದುಕೊಂಡು ಹೋಗು ಎಂದು ತಾಕೀತು ಮಾಡಿದ. ವಂಚನೆಗೀಡಾದೆನೆಂದು ಅರಿತ ಶೀನಪ್ಪರು ಉಪ್ಪಿನಂಗಡಿ ಪೊಲೀಸ್ ಠಾಣೆಯ ಮೊರೆ ಹೋದರು. ಪೊಲೀಸ್ ರು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು, ಬಳಿಕ ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರ್ ಮಧ್ಯೆ ಪ್ರವೇಶಿಸಿದ ಬಳಿಕ ಪ್ರಕರಣ ದಾಖಲಿಸಿಕೊಂಡರು.

 

Leave a Reply

error: Content is protected !!