ಶಿಶಿಲ: ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳ ತೆರವು

ಶೇರ್ ಮಾಡಿ

 

ಶಿಶಿಲ: ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಮರದ ದಿಮ್ಮಿಗಳ ತೆರವು

ಕೊಕ್ಕಡ: ವಿಪರೀತ ಮಳೆಯ ಪರಿಣಾಮವಾಗಿ ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಕಿಂಡಿ ಅಣೆಕಟ್ಟಿನಲ್ಲಿ ದೊಡ್ಡ ಗಾತ್ರದ ಮರದ ದಿಮ್ಮಿಗಳು ಹಾಗೂ ಕೊಂಬೆಗಳು ಸಿಕ್ಕಿಹಾಕಿಕೊಂಡು ನೀರಿನ ಹರಿವಿಗೆ ಅಡ್ಡಿಯಾಗಿದ್ದವು. ಇದರಿಂದ ನೀರಿನ ಮಟ್ಟ ಏರಿಕೆಯಾಗುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಶನಿವಾರ ಹಿಟಾಚಿ ಯಂತ್ರ ಬಳಸಿ ದಿಮ್ಮಿಗಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಅವಕಾಶ ಮಾಡಿಕೊಡಲಾಯಿತು.

ತೆರವು ಕಾರ್ಯಕ್ಕೆ ಶಿಶಿಲ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸಂದೀಪ್ ಅಮ್ಮುಡಂಗೆ, ಪಂಚಾಯಿತಿ ಸಿಬ್ಬಂದಿಗಳಾದ ಸುಂದರ ಮತ್ತು ಮನೋಜ್ ಅವರೊಂದಿಗೆ ಸ್ಥಳೀಯರಾದ ರಮೇಶ್ ಬದಿಗುಡ್ಡೆ, ಕರುಣಾಕರ ಅಂಬೆಲ್ತಡ್ಕ, ಮನೋಜ್ ಅಡ್ಡಹಳ್ಳ ಇವರ ಮುತುವರ್ಜಿಯಲ್ಲಿ ತೆರವು ಕಾರ್ಯ ನಡೆಯಿತು.

ಮಳೆಗಾಲದ ಅವಧಿಯಲ್ಲಿ ಮೂರು-ನಾಲ್ಕು ಬಾರಿ ಇದೇ ರೀತಿಯಾಗಿ ಮೇಲ್ಭಾಗದಿಂದ ಕೊಚ್ಚಿಕೊಂಡು ಬರುವ ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಳ್ಳುವುದು ಹಲವು ವರ್ಷಗಳಿಂದ ಸಾಮಾನ್ಯ ಸಂಗತಿಯಾಗಿದೆ. ಇದರಿಂದ ನೀರಿನ ಹರಿವಿಗೆ ಅಡ್ಡಿಯಾಗುವ ಸಾಧ್ಯತೆ ಇರುವುದರಿಂದ ಪ್ರತಿ ಬಾರಿಯೂ ಗ್ರಾಮ ಪಂಚಾಯಿತಿ ವತಿಯಿಂದ ಸ್ಥಳೀಯರ ಸಹಕಾರದೊಂದಿಗೆ ಹಿಟಾಚಿ ಯಂತ್ರವನ್ನು ತರಿಸಿ ದಿಮ್ಮಿಗಳನ್ನು ತೆರೆವುಗೊಳಿಸಲಾಗುತ್ತಿತ್ತು

ಇದೀಗ ಶಿಶಿಲ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದಲೇ ಭಾರೀ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಸ್ಥಳೀಯ ಆಡಳಿತ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

 

Leave a Reply

error: Content is protected !!