ಬೆಳ್ತಂಗಡಿಯಲ್ಲಿ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ನಾರಾಯಣ ಗುರುಗಳ ಅನುಯಾಯಿಗಳ ವತಿಯಿಂದ ಪತ್ರಿಕಾಗೋಷ್ಠಿ

ಶೇರ್ ಮಾಡಿ

ನೇಸರ ಜು.01: ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯವನ್ನು 10ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸದೆ ಗುರುಗಳಿಗೆ ಮತ್ತು ಅವರ ಅನುಯಾಯಿಗಳಿಗೆ ಅವಮಾನ ಮಾಡಿರುವ ರಾಜ್ಯ ಸರಕಾರದ ಹಠಮಾರಿ ಧೋರಣೆ ವಿರುದ್ಧ ಶ್ರೀಗುರುನಾರಾಯಣ ಸ್ವಾಮಿ ಸೇವಾ ಸಂಘ ಮತ್ತು ನಾರಾಯಣ ಗುರುಗಳ ಅನುಯಾಯಿಗಳ ವತಿಯಿಂದ ಜು.4 ರಂದು ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ ಇದರ ಅಧ್ಯಕ್ಷ ಚಿದಾನಂದ ಪೂಜಾರಿ ತಿಳಿಸಿದರು.

ಅವರು ಗುರುವಾರ ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಸವಣ್ಣ, ಡಾ. ಬಿ.ಆರ್ ಅಂಬೇಡ್ಕರ್, ಕುವೆಂಪು ಸೇರಿದಂತೆ ನಾಡಿನ ವಿವಿಧ ಸಮಾಜ ಸುಧಾರಕರ ಕುರಿತು ಪಠ್ಯ ಪರಿಷ್ಕರಣೆಯಲ್ಲಿ ಆಗಿರುವ ತಪ್ಪುಗಳಿಗೆ ಸಮಾಜದ ವಿವಿಧ ವಲಯಗಳಿಂದ ಕೇಳಿ ಬಂದ ವಿರೋಧಗಳಿಗೆ ಸ್ಪಂದಿಸಿರುವ ಶಿಕ್ಷಣ ಇಲಾಖೆ ಎಂಟು ತಿದ್ದುಪಡಿ ಮಾಡಿ ಪಠ್ಯದಲ್ಲಿ ಅಳವಡಿಸುವಂತೆ ಆದೇಶ ಹೊರಡಿಸಿದೆ. ಆದರೆ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು 10ನೇ ತರಗತಿಯ ಪಠ್ಯದಲ್ಲಿ ಮರು ಸೇರ್ಪಡೆಗೊಳಿಸಿ ಎನ್ನುವ ಬಿಲ್ಲವ ಸಮುದಾಯ ಹಾಗೂ ನಾರಾಯಣ ಗುರುಗಳ ಅನುಯಾಯಿಗಳ ಬೇಡಿಕೆಗೆ ಸರಕಾರ ಇದುವರೆಗೆ ಸ್ಪಂದಿಸಿಲ್ಲ. ಸರಕಾರದಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಇಬ್ಬರು ಸಚಿವರು ಇದ್ದರೂ ಈ ಕುರಿತು ಮಾತನಾಡಿ ಸರಿಪಡಿಸದೇ ಇರುವುದು ನಮಗೆ ನೋವು ತಂದಿದೆ ಎಂದರು.

ನಾರಾಯಣ ಗುರುಗಳ ಕುರಿತ ಪಠ್ಯವನ್ನು 10ನೇ ತರಗತಿಯ ಕನ್ನಡ (ಐಚ್ಚಿಕ) ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಸರಕಾರ ಮತ್ತು ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೆಲ ಮುಖಂಡರು ಸಮಜಾಯಿಷಿ ನೀಡುತ್ತಿದ್ದಾರೆ. ಆದರೆ ಈ ರೀತಿ ಹಿಂಬಡ್ತಿ ನೀಡಿರುವ ಷಡ್ಯಂತ್ರದ ಹಿಂದೆ ಇರುವ ಕಾಣದ ಕೈಗಳನ್ನು ಪ್ರಶ್ನಿಸುವ ಧೈರ್ಯ ಅವರುಗಳಿಗೆ ಯಾಕಿಲ್ಲ. ಕನ್ನಡ ಭಾಷಾ ಪಠ್ಯವನ್ನು ಶೇ. 20ರಷ್ಟು ವಿದ್ಯಾರ್ಥಿಗಳು ಮಾತ್ರ ಓದುತ್ತಾರೆ. ಉಳಿದ ಭಾಷಾ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಗುರುಗಳ ಕುರಿತ ಮಾಹಿತಿಯನ್ನು ಎಲ್ಲಿ ಪಡೆಯಬೇಕು ಎಂಬುದರ ಕುರಿತು ಸರಕಾರ ಯಾಕೆ ಚಿಂತನೆ ಮಾಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ ಎಂದರು.
ಇದುವರೆಗೆ ತಾಳ್ಮೆಯಿಂದ ಇರುವ ಬಿಲ್ಲವ ಸಮಾಜದ ತಾಳ್ಮೆಯನ್ನು ಪರೀಕ್ಷಿಸದಿರಿ.
ಈ ಕುರಿತು ರಾಜಕೀಯ ಭೇದ ಮರೆತು ಸಮಾಜದ ಎಲ್ಲಾ ಬಾಂಧವರು ಸೇರಿ ಪ್ರತಿಭಟನೆ ನಡೆಸಲಿದ್ದು, ನ್ಯಾಯ ಸಿಗದೇ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಮಾಡುವ ಕುರಿತು ಚಿಂತಿಸಲಾಗುತ್ತಿದೆ. ಉಗ್ರ ರೂಪದ ಪ್ರತಿಭಟನೆಗೆ ಸರಕಾರ ಅವಕಾಶ ಮಾಡಿಕೊಡದೇ ನ್ಯಾಯ ಒದಗಿಸಬೇಕು ಎಂದರು.
ಗೋಷ್ಠಿಯಲ್ಲಿ ಗು.ನಾ.ಸ್ವಾ.ಸೇ.ಸಂಘದ ಕಾರ್ಯದರ್ಶಿ ಜಯವಿಕ್ರಮ, ಯುವ ಬಿಲ್ಲವ ವೇದಿಕೆಯ ಅಧ್ಯಕ್ಷ ನಿತೇಶ್ ಹೆಚ್. ಕುಕ್ಕೇಡಿ ಉಪಸ್ಥಿತರಿದ್ದರು.

Leave a Reply

error: Content is protected !!