ಬಲ್ಲಾಳರಾಯನ ದುರ್ಗದ ಕೆಳಭಾಗ ಸ್ಪೋಟದ ಸದ್ದು ➽ ಅರಣ್ಯ ಇಲಾಖೆಯಿಂದ ಪರಿಶೀಲನೆ

ಶೇರ್ ಮಾಡಿ

ನೇಸರ ಜು.16: ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ಬಲ್ಲಾಳ ರಾಯನ ದುರ್ಗದ ಕೆಳಭಾಗದಲ್ಲಿ ಗುರುವಾರ ರಾತ್ರಿ 8ಗಂಟೆ ಸುಮಾರಿಗೆ ಕೇಳಿ ಬಂದ ಸ್ಫೋಟದ ಸದ್ದು ಹಾಗೂ ಪರಿಸರದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಸಮೀಪದ ಮಕ್ಕಿ, ಪರ್ಲ, ಎಲ್ಯರ ಕಂಡ, ದೈಪಿತ್ತಿಲು ಸಹಿತ ಇಲ್ಲಿನ 16 ಮನೆಗಳ ಜನರಲ್ಲಿ ಆತಂಕ ಎದುರಾಗಿದೆ.
ಈ ಪ್ರದೇಶಕ್ಕೆ ಬೆಳ್ತಂಗಡಿ ಅರಣ್ಯ ಇಲಾಖೆಯ ವನ್ಯಜೀವಿ ವಲಯದ ಉಪ ವಲಯಾರಣ್ಯಾಧಿಕಾರಿ ರಂಜಿತ್, ಅರಣ್ಯ ರಕ್ಷಕ ರಾಜು, ಸಹಾಯಕರಾದ ಗೋಪಾಲ ಹಾಗೂ ಸತೀಶ್ ಶನಿವಾರ ಭೇಟಿ ನೀಡಿ ಸುತ್ತಮುತ್ತಲ ಪರಿಸರಗಳಲ್ಲಿ ಪರಿಶೀಲನೆ ನಡೆಸಿದರು.

ಗುರುವಾರ ರಾತ್ರಿ ಒಂದು ಬಾರಿ ಸದ್ದು ಕೇಳಿ ಬಂದಿದ್ದು ಅದರ ಬಳಿಕ ಯಾವುದೇ ರೀತಿಯ ಸದ್ದು ಕೇಳಿ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಪರಿಸರದಲ್ಲಿರುವ ನದಿ, ಹಳ್ಳ, ತೊರೆಗಳಲ್ಲಿ ಯಾವುದೇ ರೀತಿಯ ಬೃಹತ್ ಗಾತ್ರದ ಕಲ್ಲು, ಬಂಡೆಗಳು ಕಂಡುಬಂದಿಲ್ಲ. ಸದ್ಯ ಮಾಮೂಲು ಸ್ಥಿತಿ ಮುಂದುವರಿದಿದ್ದರೂ ಸ್ಥಳೀಯ ಜನರಲ್ಲಿ ಭಯದ ವಾತಾವರಣ ಮುಂದುವರಿದಿದೆ.
ಕಲ್ಲು ಜಾರಿರುವ ಸಾಧ್ಯತೆ
ಮಳೆ ಹಾಗೂ ಮೇಲ್ಭಾಗದಿಂದ ರಭಸವಾಗಿ ನೀರು ಹರಿಯುವಾಗ ಬಲ್ಲಾಳ ರಾಯನ ದುರ್ಗದ ಭಾಗದಲ್ಲಿ ಕಲ್ಲು ಬಂಡೆ ಜಾರಿರುವ ಸಾಧ್ಯತೆ ಇದೆ. ಆದರೆ ಮೇಲ್ಬಾಗದಿಂದ ಹರಿದು ಬರುವ ನೀರು ಮಾಮೂಲು ಸ್ಥಿತಿಯಲ್ಲಿದ್ದು ಯಾವುದೇ ಬದಲಾವಣೆ ಇರುವುದಿಲ್ಲ. ಈ ಕಾರಣದಿಂದ ಪರಿಸರದ ಜನ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅರಣ್ಯಾಧಿಕಾರಿಗಳ ತಂಡ ತಿಳಿಸಿದೆ.
ಪುನರ್ವಸತಿಗೆ ಸಿದ್ಧ
ಕುದುರೆಮುಖ ರಾಷ್ಟ್ರೀಯ ಉದ್ಯಾನ ಅಂಚಿನಲ್ಲಿ ಹಾಗೂ ಅರಣ್ಯ ಇಲಾಖೆಯ ವನ್ಯಜೀವಿ ವಲಯದ ತೀರ ಸಮೀಪ ಇರುವ ಈ 16 ಕುಟುಂಬಗಳು ಪುನರ್ವಸತಿ ಕಲ್ಪಿಸಿದರೆ ತೆರಳಲು ಸಿದ್ದರಿದ್ದಾರೆ.
ಪುನರ್ವಸತಿ ಬಗ್ಗೆ ಪ್ರದೇಶದ ಸಮೀಕ್ಷೆಯನ್ನು ಈ ಹಿಂದೆ ನಡೆಸಲಾಗಿದ್ದು ಇನ್ನು ಅಂತಿಮ ಹಂತವನ್ನು ತಲುಪಿಲ್ಲ. ಸರಕಾರದಿಂದ ಪರಿಹಾರವನ್ನು ಒದಗಿಸಿ, ಪುನರ್ವಸತಿ ಕಲ್ಪಿಸಿದರೆ ಇಲ್ಲಿಂದ ತೆರಳಲು ಸಿದ್ಧವಿರುವುದಾಗಿ ಕುಟುಂಬಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿವೆ.

ಮಳೆ ಅಡ್ಡಿ
ಶನಿವಾರ ಈ ಭಾಗ ಸೇರಿದಂತೆ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದೆ. ಇಲ್ಲಿನ ಹಳ್ಳ, ನದಿ ಪ್ರದೇಶ ತುಂಬಿ ಹರಿಯುತ್ತಿದ್ದು ಹೆಚ್ಚಿನ ವೀಕ್ಷಣೆಗೆ ಅಡ್ಡಿ ನೀಡಿದೆ. ಹಾಗೂ ಮೇಲ್ಭಾಗದಿಂದ ರಭಸವಾಗಿ ಹರಿಯುವ ನೀರು, ಜಾರುವ ಕಲ್ಲು ಬಂಡೆಗಳು ಅಪಾಯಕಾರಿಯಾಗಿರುವ ಕಾರಣ ಬಲ್ಲಾಳರಾಯನ ದುರ್ಗದ ಭಾಗದಲ್ಲಿ ವೀಕ್ಷಣೆ ನಡೆಸಲು ಸಾಧ್ಯವಾಗಿಲ್ಲ. ದಿಡುಪೆ ಭಾಗದಿಂದ ಕಾಲ್ನಡಿಗೆ ಮೂಲಕ ಬೆಳಿಗ್ಗೆ 8 ಗಂಟೆಗೆ ಹೊರಟ ತಂಡ ಸಂಜೆ 5ರ ಸುಮಾರಿಗೆ ಹಿಂದಿರುಗಿತು.

Leave a Reply

error: Content is protected !!