ಬೆಳಾಲು:ವೃದ್ಧೆಯ ಕೊಲೆಗೈದು ದರೋಡೆ ನಡೆಸಿದ ಆರೋಪಿಯ ಬಂಧನ

ಶೇರ್ ಮಾಡಿ

ನೇಸರ ಜು.24: ಸಂಬಂಧಿ ವೃದ್ಧೆಯನ್ನು ಕೊಲೆಗೈದು ನಗದು ಚಿನ್ನಾಭರಣ ದೋಚಿದ ವ್ಯಕ್ತಿಯನ್ನು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬೆಳಾಲು ಸಮೀಪದ ಕೆರೆಕೋಡಿ ಎಂಬಲ್ಲಿ ಜು.23 ಮಧ್ಯಾಹ್ನ ಊಟಕ್ಕೆಂದು ಕುಳಿತಿದ್ದ ಅಕ್ಕು(85) ಎಂಬ ವೃದ್ಧೆಯನ್ನು ಹೊಡೆದು ಕೊಲೆ ಮಾಡಿ ಚಿನ್ನಾಭರಣ ಸಹಿತ ನಗದನ್ನು ದರೋಡೆ ಮಾಡಲಾಗಿತ್ತು. ಅಕ್ಕು ಅವರು ಮಗ ಡೀಕಯ್ಯ, ಸೊಸೆ ಲಲಿತಾ, ಮಗಳು ದೇವಕಿ ಹಾಗೂ ಮೊಮ್ಮಗಳೊಂದಿಗೆ ವಾಸವಿದ್ದು, ಮಗ, ಮಗಳು ಮತ್ತು ಸೊಸೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕೆರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ. ನಂತರ ಹೊರಗಡೆ ಬಂದು ನೋಡಿದಾಗ ಅಜ್ಜಿ ಅಕ್ಕು ಅವರು ತಮ್ಮ ಮನೆಯ ಸಮೀಪದ ಹಟ್ಟಿ ಸಮೀಪ ಬಿದ್ದಿರುವುದು ಗಮನಿಸಿ ತಕ್ಷಣ ಅಲ್ಲೆ ಸ್ವಲ್ಪ ದೂರದಲ್ಲಿದ್ದ ಮನೆಯವರಿಗೆ ವಿಚಾರ ತಿಳಿಸಿದಾಗ. ಅವರು ಮತ್ತು ಕೂಲಿ ಕೆಲಸಕ್ಕೆ ಹೋಗಿದ್ದ ಮನೆಯವರು ಬಂದು ನೋಡಿದಾಗ ಅಕ್ಕು ಅವರು ಚಿಂತಾಜನಕ ಸ್ಥಿತಿಯಲ್ಲಿ ಒದ್ದಾಡುತ್ತಿದ್ದರು. ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲು ವಾಹನಕ್ಕೆ ವ್ಯವಸ್ಥೆ ಮಾಡಿದರು ಅದು ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಸರಿಯಾಗಿ ಗಮನಿಸಿದಾಗ ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಬಂದು ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಮೂಲಕ ಪರಿಶೀಲನೆ ನಡೆಸಿದರು.

ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಕಡಿರುದ್ಯಾವರ ಗ್ರಾಮದ ಕಾನರ್ಪ ಸಮೀಪದ ಕುಮೇರಿ ಎಂಬಲ್ಲಿನ ಅಶೋಕ ಆರೋಪಿಯಾಗಿದ್ದು, ಶನಿವಾರ ಮಧ್ಯಾಹ್ನ ಘಟನೆಯ ನಂತರ ರಸ್ತೆಯಲ್ಲಿ ನಡೆದುಕೊಂಡು ಬೆಳಾಲಿಗೆ ಹೋಗುವುದನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ. ಈ ಬಗ್ಗೆ ಸಂಶಯಗೊಂಡ ಅವರು ಮನೆಯವರಿಗೆ ಮಾಹಿತಿ ನೀಡಿದಾಗ ಅವರು ಪೋನ್ ಮಾಡಿ ಎಲ್ಲಿದ್ದಿ ಎಂದು ವಿಚಾರಿಸಿದಾಗ ನಾರಾವಿಯಲ್ಲಿ ಇದ್ದೇನೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ. ಇದರಿಂದ ಇನ್ನಷ್ಟು ಅನುಮಾನಗೊಂಡ ಮನೆಯವರು ಪೊಲೀಸರಿಗೆ ವಿಚಾರವನ್ನು ತಿಳಿಸಿದಾಗ ಅವರು ಪೋನ್ ಲೊಕೇಶನ್ ಪರೀಕ್ಷಿಸಿದಾಗ ಸಮೀಪದಲ್ಲೇ ಸುತ್ತಾಡಿದ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಮುಂಡಾಜೆಯ ಸೋಮಂತಡ್ಕದಲ್ಲಿ ಅವನನ್ನು ವಶಕ್ಕೆ ಪಡೆದುಕೊಳ್ಳಲಾಯಿತು

ವೃದ್ಧೆಯ ಸೊಸೆಯು ಅಶೋಕನಿಗೆ ಚಿಕ್ಕಮ್ಮನಾಗಿದ್ದು ಸಂಬಂಧಿಯಾಗಿದ್ದ. ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಐಸ್ ಕ್ರೀಮ್ ವಾಹನ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕುಡಿತದ ಚಟವನ್ನೂ ಹೊಂದಿದ್ದ ಎಂದು ತಿಳಿದು ಬಂದಿದೆ.
ಮನೆಯವರ ಚಲನವಲನದ ಬಗ್ಗೆ ಅರಿವಿದ್ದ ಈತ ಮನೆಯವರು ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದ ಸಮಯ ಕೃತ್ಯ ಎಸಗಿ ನಡೆದುಕೊಂಡು ಬೆಳಾಲಿಗೆ ಹೋಗಿ ಅಲ್ಲಿಂದ ಮನೆಗೆ ಕಡೆ ಹೋಗಿದ್ದ.
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಹೆಚ್ಚುವರಿ ಅಧೀಕ್ಷಕ ಕುಮಾರ ಚಂದ್ರ ಅವರ ಮಾರ್ಗದರ್ಶನದಲ್ಲಿ, ಬಂಟ್ವಾಳ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಾಟ್ ನಿರ್ದೇಶನದಂತೆ, ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್ ನೇತೃತ್ವದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣೆಯ ಪಿ ಎಸ್ ಐ ಕೃಷ್ಣಕಾಂತ ಪಾಟೀಲ್, ಲೋಲಾಕ್ಷ, ಬೆಳ್ತಂಗಡಿ ಠಾಣೆಯ ಪಿ ಎಸ್‌ ಐ ನಂದಕುಮಾರ್ ಕಾರ್ಯಾಚರಣೆ ನಡೆಸಿದ್ದರು. ಧರ್ಮಸ್ಥಳ ಠಾಣೆಯ ಸಿಬ್ಬಂದಿ ಪ್ರಶಾಂತ್, ಅಸ್ಲಾಂ, ಪ್ರಮೋದಿನಿ, ಲೋಕೇಶ್, ಜಗದೀಶ್, ಬೆಳ್ತಂಗಡಿ ವೃತ್ತ ಕಚೇರಿಯ ವಿಜಯಕುಮಾರ್, ಸುನೀಲ್ ಚೌಡಪ್ಪ, ಇಬ್ರಾಹಿಂ ಆಸೀಫ್ ಸಹಕರಿಸಿದರು.

Leave a Reply

error: Content is protected !!