ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ

ಶೇರ್ ಮಾಡಿ

ಪುತ್ತೂರು: ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ತೆಂಕಿಲ, ಪುತ್ತೂರು ಇಲ್ಲಿ ಶಾಲಾ ಶಿಕ್ಷಕರಿಗೆ “ಪರಿಣಾಮಕಾರಿ ಬೋಧನೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ -2022” ವಿಷಯದ ಕುರಿತು ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವು ನಡೆಯಿತು.
ಕಾರ್ಯಾಗಾರವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಎಸ್.ಆರ್ ಇವರು ಉದ್ಘಾಟಿಸಿ, ಮಾತನಾಡುತ್ತಾ ಶಿಕ್ಷಕರಾದವರು ಹೆಚ್ಚಿನ ಪುಸ್ತಕಗಳನ್ನು ಓದಿ ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ತಿಳಿಸುವುದರೊಂದಿಗೆ ರಾಷ್ಟ್ರ ಕಟ್ಟುವಲ್ಲಿ ಜವಾಬ್ದಾರಿಯುತ ಪಾತ್ರವನ್ನು ವಹಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಕೃಷ್ಣಮೋಹನ್ ಇವರು ಮಾತನಾಡುತ್ತಾ ಪ್ರಜ್ಞಾವಂತ ಸುಸಂಸ್ಕೃತ ಮಕ್ಕಳನ್ನು ದೇಶಕ್ಕೆ ಕೊಡುಗೆಯಾಗಿ ನೀಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು ಎಂದರು.

ನಿವೃತ್ತ ಪ್ರಾಧ್ಯಾಪಕರು, ಮಾನವ ಸಂಪದಭಿವೃದ್ಧಿ ಪ್ರಶಿಕ್ಷಣ ಪರಿಣತರೂ, ಅಭಿಯಾನಂ ಸಂಸ್ಥೆಯ ನಿರ್ದೇಶಕರೂ ಆಗಿರುವ ಡಾ.ಶಿಕಾರಿಪುರ ಕೃಷ್ಣಮೂರ್ತಿಯವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. “ಪರಿಣಾಮಕಾರಿ ಬೋಧನೆ, ತರಗತಿ ನಿರ್ವಹಣೆ, ಸೂಕ್ತ ಕಲಿಕಾ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2022: ವಿಷಯದ ಕುರಿತು ಶಿಕ್ಷಕರಿಗೆ ಸಂಪೂರ್ಣ ಮಾಹಿತಿಯನ್ನು ಬಹಳ ಪರಿಣಾಮಕಾರಿಯಾಗಿ ನೀಡಿದರು. ಯೋಗ ಶಿಕ್ಷಕಿ ಶ್ರೀಮತಿ ಶರಾವತಿ ಶಿಕ್ಷಣದಲ್ಲಿ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ಶ್ರೀಮತಿ ಜ್ಯೋತಿಲಕ್ಷ್ಮೀ ಪ್ರಾರ್ಥಿಸಿ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತೀಶ್ ಕುಮಾರ್ ರೈ ಸ್ವಾಗತಿಸಿದರು. ಶಿಕ್ಷಕಿ ಕು.ರಮ್ಯ ವಂದಿಸಿ, ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ಕುಮಾರಿ ಮತ್ತು ಶ್ರೀಮತಿ ಸಹನಾ ಪೈ ಕಾರ್ಯಕ್ರಮ ನಿರೂಪಿಸಿದರು.

Leave a Reply

error: Content is protected !!